ಬೆಂಗಳೂರು: ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾರಬ್ ನಗರದಲ್ಲಿ ನಡೆದ ಮಹಿಳೆಯೊಬ್ಬಳ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಆಕೆಯ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ಇದೀಗ ಕೊಲೆ ಪ್ರಕರಣ ಯಾರೂ ಊಹಿಸಿರದ ಇನ್ನೊಂದು ಆಯಾಮ ಪಡೆದುಕೊಂಡಿದೆ.
ಆಫ್ರೀನ್ ಖಾನಂ(28) ಮೃತ ಮಹಿಳೆ. ಎಂಟು ವರ್ಷಗಳ ಹಿಂದೆ ಆಫ್ರೀನ್ಗೆ ಮದುವೆಯಾಗಿತ್ತು. ಇಬ್ಬರು ಮಕ್ಕಳಿದ್ದರು. ಪತಿ ಟಿಂಬರ್ ಯಾರ್ಡ್ನಲ್ಲಿ ಕೆಲಸ ಮಾಡ್ತಿದ್ದಾರೆ. ನಿನ್ನೆ ಘಟನೆ ನಡೆದಾಗ ಪತಿ ಮನೆಯಲ್ಲಿರಲಿಲ್ಲ. ಈ ವೇಳೆ ಪರಿಚಿತ ವ್ಯಕ್ತಿ ಮನೆಗೆ ಬಂದು ಹತ್ಯೆ ಮಾಡಿ ಬೀಗ ಹಾಕಿಕೊಂಡು ಹೋಗಿದ್ದಾನೆ ಎಂದು ಆರಂಭದಲ್ಲಿ ನಂಬಲಾಗಿತ್ತು.
ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಾಗಿ ಹುಡುಕಾಟ ಶುರುವಾಗಿತ್ತು. ಆದರೆ, ಅನುಮಾನ ಬಂದ ಕಾರಣ ಮೃತಳ ಪತಿ ಪತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಾಥಮಿಕ ಹಂತದ ತನಿಖೆಯಲ್ಲಿ ಪತಿಯೇ ಹತ್ಯೆ ಮಾಡಿದ್ದಾನೆ ಅನ್ನೋ ಅನುಮಾನ ದಟ್ಟವಾಗಿತ್ತು. ಮೊದಲಿಗೆ ಪತ್ನಿಯನ್ನ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು.
ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದೆ ಇರಲಿ ಅಂತ ಹಾಸಿಗೆಗೆ ಬೆಂಕಿಯಿಟ್ಚು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿತ್ತು. ಹಾಸಿಗೆ ಬೆಂಕಿಯಿಟ್ಟ ಪರಿಣಾಮ ಮನೆಯ ತುಂಬೆಲ್ಲಾ ಹೊಗೆ ದಟ್ಟವಾಗಿ ಆವರಿಸಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳೀಯರು ಮನೆಯ ಬಾಗಿಲು ಒಡೆಯುವಾಗ ಸೆಂಟರ್ ಡೋರ್ ಲಾಕ್ ಆಗಿತ್ತು. ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಸೆಂಟರ್ ಡೋರ್ ಲಾಕ್ ಆಗಿರುವುದನ್ನು ನೋಡಿದ್ರೆ, ಒಂದು ಮನೆಯ ಒಳಗಿನಿಂದ ಯಾರಾದ್ರು ಲಾಕ್ ಮಾಡಬೇಕು ಅತವಾ ಮನೆಯ ಕೀ ನಲ್ಲಿ ಹೊರಗಡೆಯಿಂದ ಯಾರಾದ್ರು ಲಾಕ್ ಮಾಡಬೇಕು. ಮನೆಯೊಳಗೆ ಮಹಿಳೆ ಕೊಲೆಯಾಗಿರುವುದರಿಂದ ಆಕೆಯೇ ಡೋರ್ ಲಾಕ್ ಮಾಡಿಕೊಂಡಿರೋದು ಅಸಾಧ್ಯ. ಹೀಗಾಗಿ ಮನೆಯ ಬೀಗದಿಂದಲೇ ಹೊರಗಡೆಯಿಂದ ಲಾಕ್ ಮಾಡಿರೋದು ಖಚಿತವಾಗಿತ್ತು.
ಮನೆಯ ಮಾಲೀಕ ಮೃತ ಮಹಿಳೆ ಹಾಗೂ ಆಕೆಯ ಪತಿಗೆ ಕೊಟ್ಟಿದ್ದು ಒಂದೇ ಒಂದು ಬೀಗ. ಸ್ಥಳೀಯರು ಮನೆ ಬಾಗಿಲು ಒಡೆದು ಒಳಗೆ ಹೋದಾಗ ಮನೆಯ ಕೀ ಒಳಗೆ ಇರಲಿಲ್ಲ. ಹೀಗಾಗಿ ಮನೆಯ ಮತ್ತೊಂದು ಕೀ ಪತಿಯ ಬಳಿಯಿತ್ತು ಅನ್ನೋ ಬಗ್ಗೆ ಮಾಹಿತಿ ಇದೆ. ಜೊತೆಗೆ ಪತಿ-ಪತ್ನಿ ಪದೇಪದೆ ಜಗಳವಾಡ್ತಿದ್ರು ಅಂತ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಎಲ್ಲ ಸಾಂಧರ್ಬಿಕ ಸಾಕ್ಷಿಗಳ ಆಧಾರದ ಮೇಲೆ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು.
ಮತ್ತೊಂದು ಟ್ವಿಸ್ಟ್ ಪಡೆದ ಪ್ರಕರಣ
ಇದೀಗ ಕೊಲೆ ಪ್ರಕರಣ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಕೊಲೆಯಾದ ಆಫ್ರೀನ್ ಖಾನಂ, 17 ವರ್ಷದ ಅಪ್ರಾಪ್ತ ಬಾಲಕನ ಜತೆ ಲವ್ವಿಡವ್ವಿ ಹೊಂದಿದ್ದಳು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಆಪ್ರಾಪ್ತ ಬಾಲಕ ಅಸಲಿಗೆ ಮೃತ ಮಹಿಳೆಯ ಅಕ್ಕನ ಮಗ. ಫೋನ್ ಕರೆ ಹಾಗೂ ಮೆಸೇಜ್ಗಳನ್ನು ನೋಡಿ ಹೆಂಡ್ತಿ ಜೊತೆ ಆರೋಪಿ ಪತಿ ಜಗಳ ಮಾಡ್ತಿದ್ದ. ಆದ್ರೆ, ಅಕ್ಕನ ಮಗನೊಂದಿಗೆ ಪತ್ನಿಯ ಲವ್ ಕಹಾನಿ ಬಗ್ಗೆ ಗಂಡನಿಗೆ ಗೊತ್ತಿರಲಿಲ್ಲ.
ನಿನ್ನೆ (ಅ.19) ಬೆಳಗ್ಗೆ ಸಹ ಪತಿ-ಪತ್ನಿನಡುವೆ ಗಲಾಟೆ ನಡೆದಿತ್ತು. ಇದರಿಂದ ಬೇಸತ್ತಿದ್ದ ಆಫ್ರೀನ್, ಅಪ್ರಾಪ್ತ ಬಾಲಕನ ಜೊತೆ ಓಡಿಹೋಗಲು ಪ್ಲಾನ್ ಮಾಡಿದ್ದಳು ಎನ್ನಲಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ತನ್ನಿಬ್ಬರು ಮಕ್ಕಳನ್ನು ಆಫ್ರೀನ್, ಅಮ್ಮನ ಮನೆಗೆ ಕಳಿಸಿದ್ದಳು. ಇಬ್ಬರೂ ಎಲ್ಲಾದ್ರು ಹೋಗೋಣವೆಂದು ಬಾಲಕನನ್ನು ಆಕೆ ಪಟ್ಟು ಹಿಡಿದಿದ್ದಳಂತೆ. ಆದರೆ, ಸೆಕೆಂಡ್ ಪಿಯುಸಿ ಓದುತ್ತಿದ್ದ ಬಾಲಕ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತೆ ಬೇಡವೆಂದು ಹೇಳಿದ್ದನಂತೆ. ಇಷ್ಟಾದ್ರು ಆಕೆ ಪೀಡಿಸುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಅಲ್ಲದೆ, ಬ್ಲಾಕ್ಮೇಲ್ ಮಾಡಿದ್ದರಿಂದ ಮನೆಯಲ್ಲಿ ಚಾಕು ತೆಗೆದುಕೊಂಡು ಬಂದು ಮನಬಂದಂತೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ಬೆಡ್ ಪಕ್ಕದಲ್ಲಿದ್ದ ಕತ್ತರಿ ತೆಗೆದುಕೊಂಡು ಕತ್ತಿಗೆ ತಿವಿದಿರುವ ಗುರುತಿದೆ. ಬಳಿಕ ಗ್ಯಾಸ್ ಹಚ್ಚಿ ಬಟ್ಟೆಗೆ ಬೆಂಕಿ ತಗುಲಿಸಿ ದೇಹದ ಮೇಲೆ ಬಿಸಾಡಿದ್ದಾನೆ ಎನ್ನಲಾಗಿದೆ. ಬಟ್ಟೆಗೆ ಹೊತ್ತಿಕೊಂಡ ಬೆಂಕಿ ಬಳಿಕ ಹಾಸಿಗೆಗೆ ತಗಲಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಪೋನ್ ಕರೆಗಳ ಆಧಾರದ ಮೇಲೆ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಈ 3 ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಕಾನೂನು ಸಮರ ಸಾರಿದ ಸಮಂತಾ! ದೂರಿನಲ್ಲಿ ಸ್ಯಾಮ್ ಹೇಳಿದ್ದಿಷ್ಟು…
ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ: ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವಿದು..!