More

    ಅಯ್ಯೋ ದುರ್ವಿಧಿಯೇ… ಕೆಲ್ಸ ಸಿಕ್ಕ ಖುಷೀಲಿ ಸೌದಿಗೆ ಹೊರಡುವಾಗ ಭೀಕರ ಅಪಘಾತ, ಕಣ್ಮುಂದೆಯೇ ಕುಟುಂಬ ನಾಶ

    ಅಂಬಾಲಪುಳ: ಸೌದಿ ಅರೇಬಿಯಾದಲ್ಲಿ ಉದ್ಯೋಗ ಸಿಕ್ಕ ಖುಷಿಯಲ್ಲಿ ಕೇರಳದ ಮಹಿಳೆಯೊಬ್ಬಳು ಮೊದಲ ಬಾರಿಗೆ ಸೌದಿ ಪ್ರವಾಸಕ್ಕೆ ರೆಡಿಯಾಗಿ ತಮ್ಮ ಕುಟುಂಬದ ಜತೆ ವಿಮಾನ ನಿಲ್ದಾಣಕ್ಕೆ ಹೊರಡುವಾಗ ಮಾರ್ಗ ಮಧ್ಯದಲ್ಲೇ ಎದುರಾದ ದುರ್ವಿಧಿಯು ಆಕೆಯ ಕನಸುಗಳನ್ನು ನುಚ್ಚು ನೂರು ಮಾಡಿದೆ.

    ಈ ಹೃದಯವಿದ್ರಾವಕ ಘಟನೆ ಕೇರಳದ ಅಂಬಾಲಪುಳ ನಡೆದಿದೆ. ತಿರುವನಂತಪುರದ ಅನಾಡ್​ ಮೂಲದ ಶೈನಿ ಎಂಬ ಮಹಿಳೆಗೆ ಸೌದಿಯಲ್ಲಿ ಕೆಲಸ ಸಿಕ್ಕಿತ್ತು. ಮೊದಲನೇ ಸೌದಿ ಅರೇಬಿಯಾ ಭೇಟಿಯಾಗಿದ್ದರಿಂದ ತುಸು ಸಂತಸಗೊಂಡಿದ್ದ ಶೈನಿ ಕೆಲಸಕ್ಕೆ ಸೇರಲು ತುಂಬಾ ಉತ್ಸುಕರಾಗಿದ್ದರು. ಶೈನಿ ಅವರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್​ ಮಾಡಿ ಬರಲೆಂದು ಆಕೆಯು ಕುಟುಂಬವೂ ಕೂಡ ಕಾರನ್ನೇರಿದ್ದರು.

    ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ನೆಡುಂಬಸ್ಸೆರಿ ವಿಮಾನ ನಿಲ್ದಾಣದ ಕಡೆ ಹೋಗುವಾಗ ಅಂಬಾಲಪುಳ ಬಳಿ ಶೈನಿ ಮತ್ತು ಅವರ ಕುಟುಂಬದವರಿದ್ದ ಕಾರು ಎದುರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಶೈನಿ ಹೊರತುಪಡಿಸಿ ಆಕೆಯ ಪತಿ, ಮಗ ಮತ್ತು ಸಹೋದರ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶೈನಿ ಅವರನ್ನು ತಿರುವನಂತಪುರದ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತಪಟ್ಟವರನ್ನು ಶೈನಿ ಪತಿ ಸುಧೀಶ್​ ಲಾಲ್​ (37), ಮಗ ನಿರಂಜನ್​ (12), ಸಹೋದರ ಶೈಜು (34) ಮತ್ತು ಸುಧೀಶ್​ ಸೋದರಸಂಬಂಧಿ ಅಭಿರಾಗ್​ (27) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಶೈನಿ ಅವರನ್ನು ಮೊದಲು ಅಲಪ್ಪುಳ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ತಿರುವನಂತಪುರ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸುಧೀಶ್ ಲಾಲ್ ಕಾರು ಚಲಾಯಿಸುತ್ತಿದ್ದರು. ಈ ವೇಳೆ ನಿದ್ರೆಗೆ ಜಾರಿದ ಕಾರಣ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಅಂಬಲಪುಳ ಪೊಲೀಸರು ಹಾಗೂ ಸ್ಥಳೀಯರು ಸೇರಿ ನಿರಂಜನ್ ದೇಹವನ್ನು ಕಾರಿನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಆದರೆ, ತಕಳಿಯಿಂದ ಅಗ್ನಿಶಾಮಕ ದಳದ ತಂಡ ಆಗಮಿಸಿ ಕಾರನ್ನು ಕತ್ತರಿಸಿ ಇತರರನ್ನು ಹೊರ ತೆಗೆಯಲಾಯಿತು.

    ಅಪಘಾತದ ರಭಸಕ್ಕೆ ಮುಂದಿನ ಚಕ್ರಗಳನ್ನು ಕಳೆದುಕೊಂಡ ಲಾರಿ ನಿಯಂತ್ರಣ ತಪ್ಪಿ ಪಕ್ಕದ ಅಂಗಡಿಗೆ ಡಿಕ್ಕಿ ಹೊಡೆದು ನಿಂತಿದೆ. ಮೃತದೇಹಗಳನ್ನು ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

    ಶೈನಿಗೆ ಸೌದಿಯ ಆಸ್ಪತ್ರೆಯೊಂದರಲ್ಲಿ ಕೆಲಸದ ಆಫರ್ ಬಂದಿತ್ತು. ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ಕೊನೆಗಾಣಿಸಲು ವಿದೇಶಕ್ಕೆ ಹಾರಲು ಸಿದ್ಧತೆ ನಡೆಸಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಇದೀ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. (ಏಜೆನ್ಸೀಸ್​)

    ಒಟ್ಟು 545 PSI ಹುದ್ದೆ, ಕಲಬುರಗಿಗೆ ಸಿಂಹಪಾಲು, ಪರೀಕ್ಷಾ ಕ್ರೇಂದ್ರವೊಂದರಲ್ಲೇ 11 ಅಭ್ಯರ್ಥಿಗಳ ಆಯ್ಕೆ!

    ನಕಲಿ ನೇಮಕಾತಿ ಪತ್ರ ಹಾವಳಿ: ಸಮಾಜ ಕಲ್ಯಾಣ ಇಲಾಖೆಯಿಂದ ಪೊಲೀಸರಿಗೆ ದೂರು

    ಆನ್​ಲೈನ್​ನಲ್ಲಿ 1.45 ಕೋಟಿ ರೂ. ವ್ಯವಹಾರ ನಡೆಸಿದ್ದ ಸಾಮಾನ್ಯ ಮಹಿಳೆಯ ಸಾವಿನ ರಹಸ್ಯ ಕೊನೆಗೂ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts