ಕಾಳಿಮೇಡು: ದೇವಸ್ಥಾನದ ಪಲ್ಲಕ್ಕಿ ಉತ್ಸವದ ವೇಳೆ ವಿದ್ಯುತ್ ಶಾಕ್ನಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ದುರಂತ ಸಾವಿಗೀಡಾಗಿದ್ದು, 15 ಜನರು ಗಂಭೀರ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಇಂದು (ಏ.27) ಮುಂಜಾನೆ ನಡೆದಿದೆ.
ಜಿಲ್ಲೆಯ ಕಾಳಿಮೇಡುವಿನಲ್ಲಿರುವ ಅಪ್ಪಾರ್ ದೇವಸ್ಥಾನದ ಪಲ್ಲಕ್ಕಿ ಉತ್ಸವ ಇಂದು ಬೆಳಗ್ಗೆ ನಡೆಯುತ್ತಿತ್ತು. ಈ ವೇಳೆ ಪಲ್ಲಕ್ಕಿ ಉತ್ಸವವು ಅಧಿಕ ವಿದ್ಯುತ್ ಪ್ರಸರಣ ಅಥವಾ ಹೈ ಟೆನ್ಸನ್ ವೈರ್ ಕೆಳಗೆ ಬಂದು ನಿಂತಾಗ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಅವಘಡ ಸಂಭವಿಸಿದೆ.
ಈ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿರುಚಿರಾಪಳ್ಳಿಯ ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ ವಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಸಾಮಾನ್ಯವಾಗಿ ದೇವಸ್ಥಾನದ ಉತ್ಸವದ ಮಾರ್ಗದಲ್ಲಿ ವಿದ್ಯುತ್ ಲೈನ್ ಅನ್ನು ಆಫ್ ಮಾಡಲಾಗುತ್ತದೆ. ದೇವಸ್ಥಾನದ ಪಲ್ಲಕ್ಕಿಯು ಹೆಚ್ಚು ಎತ್ತರ ಇಲ್ಲದಿದ್ದರಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರಲಿಲ್ಲ. ಆದರೆ, ಪಲ್ಲಕ್ಕಿಗೆ ತುಂಬಾ ಅಲಂಕಾರ ಮಾಡಿ ಮಾಡಿದ್ದರಿಂದ ಅದು ಸ್ವಲ್ಪ ಎತ್ತರವಾಗಿದೆ. ಇದರಿಂದಲೇ ವಿದ್ಯುತ್ ಸಂಪರ್ಕಗೊಂಡು ದುರಂತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪಲ್ಲಕ್ಕಿಯು ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದ ನಂತರ ಸಂಪೂರ್ಣವಾಗಿ ನಾಶವಾಗಿರುವುದನ್ನು ಘಟನೆ ಸಂಬಂಧಿಸಿದ ವಿಡಿಯೋದಲ್ಲಿ ಕಾಣಬಹುದಾಗಿದೆ. ಪ್ರತಿ ವರ್ಷ ತಮಿಳುನಾಡಿನಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. (ಏಜೆನ್ಸೀಸ್)
ಪಿಎಸ್ಐ ನೇಮಕಾತಿ ಹಗರಣ: ಅಕ್ರಮಕ್ಕೆ ಬಳಸ್ತಿದ್ದ ಬ್ಲೂಟೂತ್ ಡಿವೈಸ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗ
ಮಹಿಳಾ ಸೂಸೈಡ್ ಬಾಂಬರ್ ದಾಳಿಗೆ ಚೀನಿಯರು ಸೇರಿ ನಾಲ್ವರ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಿಸಿ; ಮುಖ್ಯಮಂತ್ರಿಗೆ ಕೆಎಂಎಫ್ ಅಧ್ಯಕ್ಷರ ಮನವಿ