More

    ರೈತರಿಗೆ ಶೀಘ್ರ ಬರ ಪರಿಹಾರ :ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಭರವಸೆ

    ಬಳ್ಳಾರಿ : ಬೀಜ ಬಿತ್ತನೆ ಮಾಡಿ, ನಷ್ಟ ಹೊಂದಿದ ಎಲ್ಲ ರೈತರಿಗೆ ಖಂಡಿತವಾಗಿ ಬರ ಪರಿಹಾರ ನೀಡಲಾಗುವುದು. ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಕ್ರಮವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರೈತರಿಗೆ ಆಶ್ವಾಸನೆ ನೀಡಿದರು.

    ತಾಲೂಕಿನ ಹಲಕುಂದಿ, ಮಿಂಚೇರಿ, ಸಂಜೀವರಾಯನಕೋಟೆಯ ಸೇರಿದಂತೆ ಹಲವು ಗ್ರಾಮಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳ ತಂಡದೊಂದಿಗೆ ಶನಿವಾರ ಭೇಟಿ ನೀಡಿ ಬರ ಪರಿಶೀಲನೆ ನಡೆಸಿ ಮಾತನಾಡಿದರು.

    ಹಲಕುಂದಿ ಗ್ರಾಮದ ರೈತ ನಂದಾ ಅವರ ತೊಗರಿ ಹೊಲಕ್ಕೆ ಭೇಟಿ ನೀಡಿದ ವೇಳೆ ಕಳೆದ ಒಂದೆರಡು ದಿನಗಳಿಂದ ಮಳೆ ಆಗಿದ್ದು, ಬೆಳೆ ಹಸಿರು ಇದೆ. ಈ ವೇಳೆಗೆ ತೊಗರಿ ಕಾಳು ಕಟ್ಟಬೇಕಿತ್ತು. ಬೆಳೆ ಒಣಗದೆ ಜೀವ ಹಿಡಿದು ಹಸಿರಾಗಿ ನಿಂತಿದೆ. ಈ ತೊಗರಿ ಬೆಳೆಯ ಫಸಲು ಸಿಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಚಿವರಿಗೆ ತಿಳಿಸಿದರು.

    ಬಳ್ಳಾರಿ ಜಿಲ್ಲೆಯಲ್ಲಿ 68 ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ನಷ್ಟವಾಗಿದೆ. ಮೆಣಸಿನ ಕಾಯಿ, ಹತ್ತಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಇತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿದೆ. ಅಲ್ಲಲ್ಲಿ ಬೆಳೆ ರೋಗ ಅಂಟಿದೆ. ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡವು ಭೇಟಿ ನೀಡಿದ್ದು, ಸಮೀಕ್ಷೆ ನಡೆಸಿದ್ದಾರೆ ಎಂದು ಸಚಿವರಿಗೆ ಗಮನಕ್ಕೆ ತಂದರು.

    ಪ್ರತಿ ಹೆಕ್ಟೇರ್‌ಗೆ 8 ಸಾವಿರ ರೂ. ನಷ್ಟ ಪರಿಹಾರ ನೀಡಲಾಗುತ್ತದೆ. ಪರಿಹಾರ ನೀಡಲು ಕೂಡಲೇ ಕ್ರಮಕೈಗೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸಚಿವ ನಾಗೇಂದ್ರ ಸೂಚನೆ ನೀಡಿದರು.

    ಬೆಳೆಗಳಿಗೆ ವಿಮೆ ಮಾಡಿಸಿದ್ದೇವೆ. ನಷ್ಟವಾದ ಬೆಳೆಗೆ ವಿಮೆ ನೀಡಬೇಕು ಎಂದು ಸಚಿವರಲ್ಲಿ ರೈತರು ಅಳಲು ತೊಡಿಕೊಂಡರು. ಈ ಬಗ್ಗೆ ಪರಿಶೀಲಿಸುವುದಾಗಿ ರೈತರಿಗೆ ಭರವಸೆ ನೀಡಿದರು.

    ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ, ತಹಸೀಲ್ದಾರ್ ಗುರುರಾಜ್, ಕೃಷಿ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮುಖಂಡರಾದ ಅಲ್ಲಂ ಪ್ರಶಾಂತ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

    • ಬಿಜೆಪಿ ನಾಯಕರಿಂದ ರಾಜಕೀಯ
      ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಎರಡನೇ ಬಾರಿಗೆ ಬರ ಸಮೀಕ್ಷೆ ಮಾಡಲಾಗುತ್ತಿದೆ. ಆದರೆ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಬರ ಅಧ್ಯಯನ ಮಾಡುತ್ತಿದ್ದಾರೆ ಎಂದು ಸಚಿವ ನಾಗೇಂದ್ರ ಹೇಳಿದರು. ಬರ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 68 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರದಿಂದ ಜಿಲ್ಲೆಗೆ 7.50 ಕೋಟಿ ರೂ.ಬರ ಪರಿಹಾರ ಬಿಡುಗಡೆ ಆಗಿದೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಹಣ ಬಿಡುಗಡೆ ಆಗಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts