ಅಂಕೋಲಾ: ಸರ್ಕಾರದ ಗೃಹಲಕ್ಷ್ಮೀ ನೋಂದಣಿ ಕುರಿತು ಹರಿದಾಡುತ್ತಿರುವ ಅಂತೆಕಂತೆಗಳ ಪರಿಣಾಮ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿಗಾಗಿ ಆಹಾರ ಇಲಾಖೆ ಕಚೇರಿಗೆ ಸೋಮವಾರ ಧಾವಿಸಿದ್ದರಿಂದ ಜನಜಂಗುಳಿ ಉಂಟಾಯಿತು.
ತಾಲೂಕು ಕಚೇರಿ ಬಳಿ ಬೆಳಗ್ಗೆಯಿಂದಲೇ 500ಕ್ಕೂ ಹೆಚ್ಚು ಜನ ಸಾಲುಗಟ್ಟಿ ನಿಂತಿದ್ದರಿಂದ ಸಿಬ್ಬಂದಿ ಜನರ ನಿಯಂತ್ರಣಕ್ಕೆ ಹರ ಸಾಹಸ ಪಡುವಂತಾಯಿತು.
ಗಾಳಿ ಸುದ್ದಿಯಿಂದ ಗೋಳು…
ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಇದ್ದರೆ ಮಾತ್ರ ಯೋಜನೆಯ ಫಲಾನುಭವಿ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಇಲ್ಲದಿದ್ದರೆ ಬರುವುದಿಲ್ಲ ಎಂಬ ಸುದ್ದಿ ವೈರಲ್ ಆಗಿರುವುದೇ ಈ ಜನ ಸಂದಣಿಗೆ ಕಾರಣವಾಗಿದೆ.
ಮಾಹಿತಿ ಕೊರತೆ
ಕೆಲವು ಗ್ರಾಮ ಪಂಚಾಯಿತಿಗಳಲ್ಲೇ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ನಮೂದಿಸಿ ತನ್ನಿ ಎನ್ನುತ್ತಾರೆಂದು ಹಲವರು ಆರೋಪಿಸಿದ್ದಾರೆ.
ದೂರದ ಅಚವೆ, ಹಿಲ್ಲೂರು, ಹಳವಳ್ಳಿ, ಡೋಂಗ್ರಿ ಭಾಗಗಳಿಂದ ಜನ ತಮ್ಮ ಕೃಷಿ ಕಾರ್ಯಗಳನ್ನೆಲ್ಲ ಬಿಟ್ಟು ಬಂದು ಸಾಲಿನಲ್ಲಿ ನಿಲ್ಲುವಂತಾಗಿದೆ.
ಈ ಕುರಿತು ಆಹಾರ ನಿರೀಕ್ಷಕರಲ್ಲಿ ವಿಚಾರಿಸಿದಾಗ ಆ ತರಹ ಏನಿಲ್ಲ ಪಡಿತರ ಚೀಟಿಯಲ್ಲಿ ಹೆಸರಿದ್ದರೆ ಸಾಕು ಮನೆಯ ಯಜಮಾನಿ ಎಂದು ನಮೂದಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.