ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ ಮತ್ತು ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ಚಿತ್ರದ ಬಿಡುಗಡೆ ದಿನಾಂಕದ ಘೋಷಣೆಯಾಗಿದ್ದು, ಈ ಚಿತ್ರವು ಆಗಸ್ಟ್ 13 ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ದಿವಾಕರನ ಸಾಹಸಗಳು: ಬೆಲ್ ಬಾಟಮ್ 2 ಇನ್ನಷ್ಟು ದೊಡ್ಡದಾಗಿದೆ
ಕಳೆದ ವರ್ಷದ ಹಿಟ್ ಚಿತ್ರವಾದ ‘ಅಲಾ ವೈಕುಂಠಪುರಂಲೋ’ ನಂತರ ಅಲ್ಲು ಅರ್ಜುನ್ ಒಪ್ಪಿದ ಚಿತ್ರವೆಂದರೆ, ಅದು ‘ಪುಷ್ಪ’. ತೆಲುಗಿನ ಜನಪ್ರಿಯ ನಿರ್ದೇಶಕ ಸುಕುಮಾರ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಕಳೆದ ವರ್ಷವೇ ಈ ಚಿತ್ರ ಪ್ರಾರಂಭವಾಗಿದ್ದು, ಲಾಕ್ಡೌನ್ನಿಂದಾಗಿ ಚಿತ್ರೀಕರಣ ನಿಂತಿತ್ತು. ಕಳೆದ ವರ್ಷದ ಕೊನೆಯಲ್ಲಿ ಮತ್ತೆ ಚಿತ್ರೀಕರಣ ಪ್ರಾರಂಭವಾಗಿದ್ದು, ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ಮನ್ಯ ಪ್ರದೇಶದ ಮಾರೆಡಿಪಲ್ಲಿ ಅರಣ್ಯಪ್ರದೇಶದಲ್ಲಿ ‘ಪುಷ್ಪ’ ಶೂಟಿಂಗ್ ಭರದಿಂದ ಸಾಗುತ್ತಿದೆ.
ಗುರುವಾರ ಬೆಳಿಗ್ಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಬಿಡುಗಡೆಯ ದಿನಾಂಕ ಸಹ ಘೋಷಣೆಯಾಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ಕನ್ನಡದ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ವಿಲನ್ ಆಗಿ ಮತ್ತೊಬ್ಬ ಕನ್ನಡಿಗ ಧನಂಜಯ್ ಇದ್ದಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: ‘ಆದಿಪುರುಷ್’ನಲ್ಲಿ ಲಕ್ಷ್ಮಣ ಆಗ್ತಾರಾ ಟೈಗರ್ ಶ್ರಾಫ್?
ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಶೆಟ್ಟಿ ಮೀಡಿಯಾ ಜಂಟಿ ನಿರ್ಮಾಣದಲ್ಲಿ ಸಿದ್ದಗೊಳ್ಳುತ್ತಿರುವ ಈ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಆಗಸ್ಟ್ 13 ರಂದು ಚಿತ್ರ ಬಿಡುಗಡೆಯಾಗಲಿದೆ.