ಬೆಂಗಳೂರು: ಚೀನಾದ ಕರೊನಾ ವೈರಸ್ ರಾಜ್ಯದಲ್ಲಿಯೂ ಕಾಣಿಸಿಕೊಂಡಿದೆ. ರಾಜ್ಯದ ಆರು ಜನರಲ್ಲಿ ವೈರಸ್ ಪತ್ತೆಯಾಗಿದ್ದು, ವೈರಸ್ ಹರಡದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಆದೇಶಿಸಿದೆ. ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಿದ್ದ ಸರ್ಕಾರ ಇಂದಿನಿಂದ ಒಂದು ವಾರದ ಕಾಲ ಬರ್ತ್ಡೇ, ಮದುವೆ ಕಾರ್ಯಕ್ರಮಗಳನ್ನೂ ಸಹ ನಡೆಸದಿರುವಂತೆ ಆದೇಶಿಸಿದೆ.
ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮಾರ್ಚ್ 17ರಂದು ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸರ್ಕಾರ ನಿರ್ಬಂಧ ಹೇರಿರುವ ಸಮಯದಲ್ಲಿ ಅಪ್ಪು ಬರ್ತ್ಡೇ ಬಂದಿರುವುದು ಅಭಿಮಾನಿಗಳಿಗೆ ಭಾರೀ ಬೇಸರ ಉಂಟುಮಾಡಿದೆ. ತಮ್ಮ ಹುಟ್ಟುಹಬ್ಬದ ಕುರಿತಾಗಿ ಪುನೀತ್ ಮಾತನಾಡಿದ್ದು, ಅಭಿಮಾನಿಗಳಿಂದ ಗಿಫ್ಟ್ ಒಂದನ್ನು ಕೇಳಿದ್ದಾರೆ.
ತಾನು ಈ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿರುವ ನಟ ಪುನೀತ್ ರಾಜ್ಕುಮಾರ್, ನೀವು ಕರೊನಾ ಬರದಂತೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿದ್ದರೆ ಅದೇ ನನಗೆ ದೊಡ್ಡ ಉಡುಗೊರೆ ಎಂದು ತಿಳಿಸಿದ್ದಾರೆ. ಹುಟ್ಟುಹಬ್ಬದ ದಿನ ಯಾರೂ ನನ್ನ ಮನೆಯ ಬಳಿ ಬರಬೇಡಿ, ಅಂದು ನಾನು ಮನೆಯಲ್ಲಿರುವುದಿಲ್ಲ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸರ್ಕಾರದ ಜತೆ ಕೈ ಜೋಡಿಸಬೇಕು. ಇಷ್ಟು ವರ್ಷ ಬೇರೆ ಬೇರೆ ಊರುಗಳಿಂದ ಬಂದು ನನಗೆ ಶುಭಹಾರೈಸಿ ಪ್ರೀತಿ ತೋರಿಸಿದ್ದೀರಿ. ಆ ಪ್ರೀತಿ ನನ್ನ ಮೇಲೆ ಸದಾ ಇರುತ್ತದೆ ಎಂದು ನಾನು ನಂಬಿದ್ದೇನೆ. ಎಲ್ಲರೂ ಹುಷಾರಾಗಿರಿ ಎಂದು ನಟ ತಿಳಿಸಿದ್ದಾರೆ. (ಏಜೆನ್ಸೀಸ್)
ನೀವು ಮುನ್ನೆಚ್ಚರಿಕಿ ವಹಿಸಿ ಸುರಕ್ಷಿತವಾಗಿರುವುದೇ ನನಗೆ ಕೊಡುವ ಒಂದು ದೊಡ್ಡ ಉಡುಗೊರೆ 🙏 pic.twitter.com/xelLH3T9kL
— Puneeth Rajkumar (@PuneethRajkumar) March 14, 2020
ಬೆಲೆ ಏರಿಕೆ ಶಾಕ್ ನೀಡಿದ ಸರ್ಕಾರ: ಪೆಟ್ರೋಲ್, ಡೀಸೆಲ್ ಬೆಲೆ 3 ರೂಪಾಯಿ ಹೆಚ್ಚಳ