ಕಳಸ: ಶ್ರೀ ಕಾಮಕುಮಾರ ನಂದಿ ಸ್ವಾಮೀಜಿ ಹತ್ಯೆ ಕೇವಲ ಜೈನ ಧರ್ಮಕ್ಕೆ ಆದ ನೋವಲ್ಲ. ದೇಶದ ದೊಡ್ಡ ದೋಷ ಎಂದು ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಜೈನಮುನಿ ಹತ್ಯೆ ಖಂಡಿಸಿ ಗುರುವಾರ ತಾಲೂಕಿನ ಜೈನ ಸಮುದಾಯದವರು ಮೌನ ಪ್ರತಿಭಟನೆ ನಡೆಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಇಂಥ ಹತ್ಯೆಗಳು ಭೂಮಿತಾಯಿಗೂ ನೋವುಂಟು ಮಾಡುತ್ತದೆ. ಧರ್ಮದ ವಿಚಾರದಲ್ಲಿ ಎಲ್ಲ ದೇಶಗಳಿಗೂ ತಾಯಿಯಂತಿರುವ ಭಾರತದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು ಎಂದರು.
ಮುನಿಗಳನ್ನು ಹತ್ಯೆ ಮಾಡಿದವರನ್ನು ಸರ್ಕಾರ ಕಠಿಣ ಶಿಕ್ಷೆಗೆ ಗುರುಪಡಿಸಬೇಕು. ಜತೆಗೆ ಜೈನ ಮುನಿಗಳಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ನೂರಾರು ಶ್ರಾವಕ ಶ್ರಾವಕಿಯರು ಕಲಶೇಶ್ವರ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಜೈನ ಮುಖಂಡರಾದ ಕೆ.ಸಿ.ಧರಣೇಂದ್ರ, ಬ್ರಹ್ಮದೇವ, ಎಚ್.ಸಿ.ಅಣ್ಣಯ್ಯ, ಪದ್ಮರಾಜಯ್ಯ, ಸುದರ್ಶನ್, ಅಜಿತ್, ಧರಣೇಂದ್ರ, ಸುಕುಮಾರ್, ಸನ್ಮತಿ, ಶ್ರೀಪಾಲಯ್ಯ, ಸುದರ್ಶನ್ ಇತರರಿದ್ದರು.