ಮೂಡಿಗೆರೆ: ಪಟ್ಟಣದ ಗೆಂಡೆಹಳ್ಳಿ ರಸ್ತೆಯಿಂದ ಛತ್ರ ಮೈದಾನಕ್ಕೆ ತೆರಳುವ ಮುಖ್ಯ ರಸ್ತೆಗೆ ನಟ ಪುನೀತ್ ರಾಜಕುಮಾರ್ ಹಾಗೂ ಪೌರಕಾರ್ಮಿಕರ ಬಡಾವಣೆಗೆ ಗೌತಮ ಬುದ್ಧ ಬಡಾವಣೆ ಎಂದು ನಾಮಕರಣಗೊಳಿಸಲಾಗಿದೆ ಎಂದು ಪಪಂ ಸದಸ್ಯ ಜೆ.ಬಿ.ಧರ್ಮಪಾಲ್ ತಿಳಿಸಿದರು.
ಈ ಹಿಂದೆ ನಾನು ಪಪಂ ಅಧ್ಯಕ್ಷನಾಗಿದ್ದಾಗ ಈ ಎರಡೂ ಹೆಸರನ್ನು ರಸ್ತೆ ಮತ್ತು ಬಡಾವಣೆಗೆ ನಾಮಕರಣಗೊಳಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಪಪಂ ನಿರ್ಣಯಕ್ಕೆ ಪೌರಾಡಳಿತ ನಿರ್ದೇಶನಾಲಯದಿಂದ ಅನುಮೋದನೆ ದೊರೆತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುನೀತ್ ರಾಜಕುಮಾರ್ ಅವರ ಜನ್ಮದಿನ ಮಾ.17ರಂದು ರಸ್ತೆಗೆ ಅವರ ಹೆಸರು ನಾಮಕರಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಗೌತಮ ಬುದ್ಧ ಬಡಾವಣೆ ಹೆಸರು ನಾಮಕರಣಗೊಳಿಸಲಾಗುವುದು. ಶಾಸಕಿ ನಯನಾ ಮೋಟಮ್ಮ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಪಪಂ ಸದಸ್ಯರಾದ ಸುಧೀರ್, ಎಚ್.ಪಿ.ರಮೇಶ್, ಮನೋಜ್ಕುಮಾರ್ ಸೇರಿದಂತೆ ಪಪಂನ ಎಲ್ಲ ಸದಸ್ಯರು ನಾಮಕರಣಕ್ಕೆ ಕೈ ಜೋಡಿಸಿದ್ದಾರೆ ಎಂದು ಹೇಳಿದರು.