ಮೇಲುಕೋಟೆ: ಆಚಾರ್ಯ ರಾಮಾನುಜರಿಂದ ದಿವ್ಯಕ್ಷೇತ್ರ ಮೇಲುಕೋಟೆ ಜೀರ್ಣೋದ್ಧಾರಗೊಂಡು ಚೆಲುವನಾರಾಯಣಸ್ವಾಮಿಯನ್ನು ಜಗತ್ತಿಗೆ ಪ್ರಕಾಶಪಡಿಸಿದ ಪ್ರತೀಕವಾದ ಪುನರ್ವಸು ಉತ್ಸವ ಜ.24ರಂದು ನಡೆಯಲಿದೆ.
ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವದ ಕೈಂಕರ್ಯಗಳು ನಡೆಯಲಿದ್ದು, ಪುನರ್ವಸು ಉತ್ಸವಕ್ಕಾಗಿ ದೇವಾಲಯ ಸಜ್ಜುಗೊಳ್ಳುತ್ತಿದೆ. ಬುಧವಾರ ಬೆಳಗ್ಗೆ 4 ಗಂಟೆಗೆ ರಾಮಾನುಜರಿಗೆ ಅಭಿಷೇಕ, 6 ಗಂಟೆಗೆ ಕಲ್ಯಾಣಿಗೆ ಉತ್ಸವ, 8.30ಕ್ಕೆ ಶ್ವೇತವಸ್ತ್ರಧಾರಣೆ ಗದ್ಯತ್ರಯಗೋಷ್ಠಿ ತಿರುಪ್ಪಾವೈ ಶಾತ್ತುಮೊರೆ ನಡೆದು 9 ಗಂಟೆಗೆ ದೇವಾಲಯಕ್ಕೆ ರಾಮಾನುಜರ ಉತ್ಸವ ಆರಂಭವಾಗಲಿದೆ. 11 ಗಂಟೆಗೆ ದೇವಾಲಯದ ರಾಜಗೋಪುರದ ಬಳಿ ರಾಮಾನುಜ ನೂತ್ತಂದಾದಿ ಶಾತ್ತುಮೊರೆ ರಾಮಾನುಜರು ತಿರುನಾರಾಯಣನನ್ನು ಕಂಡು ನಿಜವಾದ ಬೆಳಕುಕಂಡೆ ನಾರಾಯಣನ ದರ್ಶ ಮಾಡಿದೆ ಎಂದು ಸ್ತುತಿಸಿದ ಪಾಶುರದ ಪಾರಾಯಣ ನಡೆಯಲಿದೆ. 12 ಗಂಟೆಗೆ ವಂಗೀಪುರಂ ಮನೆತನದಿಂದ ಸ್ವಾಮಿಗೆ ನೂರಾರು ತಟ್ಟೆಗಳಲ್ಲಿ ಫಲಪುಷ್ಪ ಸಮರ್ಪಣೆಯ ಕೈಂಕರ್ಯ ನಡೆಯಲಿದೆ 1.30 ರ ವೇಳೆಗೆ ತಿರುವಾರಾಧನೆ, ತೀರ್ಥಗೋಷ್ಠಿಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಪೂಜೆಯ ನಂತರ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ತಲುಪಲಿದೆ.