More

    ಮೇಲುಕೋಟೆ ವೈರಮುಡಿ ಉತ್ಸವ ಸಂಪನ್ನ

    ಮೇಲುಕೋಟೆ: ಯದುಗಿರಿಯ ಅಧಿದೈವ ಚೆಲ್ವತಿರುನಾರಾಯಣಸ್ವಾಮಿಗೆ ಬುಧವಾರ ವೇದ ಮಂತ್ರಗಳೊಂದಿಗೆ ದ್ವಾದಶ ಆರಾಧನೆ ಮೂಲಕ ಮಹಾಭಿಷೇಕ ನೆರವೇರುವುದರೊಂದಿಗೆ ಹತ್ತು ದಿನಗಳಿಂದ ನಡೆಯುತ್ತಿದ್ದ ವೈರಮುಡಿ ಬ್ರಹ್ಮೋತ್ಸವ ವಿಧ್ಯುಕ್ತವಾಗಿ ಸಂಪನ್ನಗೊಂಡಿತು.

    ವೈರಮುಡಿ ಜಾತ್ರಾಮಹೋತ್ಸವದ ಹತ್ತನೇತಿರುನಾಳ್ ದಿನವಾದ ಬುಧವಾರ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಿ ಯಾವುದೇ ಲೋಪದೋಶಗಳಿದ್ದರೂ ಕ್ಷಮಿಸುವಂತೆ ಕೋರಿ ಸಂಪ್ರೋಕ್ಷಣೆ ಮಾಡಿದ ನಂತರ ಮೂಲಮೂರ್ತಿ, ಉತ್ಸವಮೂರ್ತಿಗೆ ಹಾಲು, ಜೇನು, ಮೊಸರು, ಎಳನೀರು ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಲಾಯಿತು. ಮಹಾಭಿಷೇಕ, ಹರಿಶಿಣ ಅಲಂಕಾರ ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು.

    ರ್ಷಕ್ಕೆ ಎರಡು ಸಲ ಮಾತ್ರ ಮೂಲಮೂರ್ತಿಗೆ ಅಭಿಷೇಕ ನಡೆಯುವ ಸಂಪ್ರದಾಯವಿದ್ದು, ಪ್ರಮುಖವಾದ ಮಹಾಭಿಷೇಕ ವೈರಮುಡಿ ಬ್ರಹ್ಮೋತ್ಸವದಲ್ಲಿ ಕೊನೆಯ ದಿನ ನಡೆಯಿತು. ಈ ವರ್ಷ ಆಷಾಢಮಾಸದಲ್ಲಿ ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದಂದು 2ನೇ ಬಾರಿ ಮಹಾಭಿಷೇಕ ನಡೆಯುತ್ತದೆ.

    ಗರ್ಭಗೃಹ ಪ್ರದಕ್ಷಿಣೆ ಅವಕಾಶ: ಮೇಲುಕೋಟೆ ಸಾಕ್ಷಾತ್ ಶ್ರೀಮನ್ನಾರಾಯಣನೇ ನೆಲೆಸಿ ಸದಾಕಾಲ ದಿವ್ಯದರ್ಶನ ನೀಡುವ ಕಾರಣ ಭೂವೈಕುಂಠವಾಗಿದ್ದು, ಇಲ್ಲಿ ವೈಕುಂಠದ್ವಾರ ಇಲ್ಲ ಬದಲಾಗಿ ವರ್ಷಕ್ಕೊಮ್ಮೆ ತಿರುನಾರಾಯಣಸ್ವಾಮಿಯ ಮೂಲಗರ್ಭಗೃಹ ಪ್ರವೇಶಕ್ಕೆ ಮಹಾಭಿಷೇಕದ ರಾತ್ರಿ ಪ್ರದಕ್ಷಿಣೆಗೆ ಅವಕಾಶ ನೀಡಲಾಗುತ್ತಿದ್ದು, ಬುಧವಾರ ರಾತ್ರಿ ಭಕ್ತರ ಪ್ರದಕ್ಷಿಣೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಹನುಮಂತ ವಾಹನೋತ್ಸವ ಬೀದಿಗಳಲ್ಲಿ ಮೆರವಣಿಗೆ ಬರುವ ವೇಳೆಯಷ್ಟೇ ಮಾತ್ರ ಪ್ರದಕ್ಷಿಣೆಗೆ ಅವಕಾಶವಿರುವ ಕಾರಣ ನೂರಾರು ಭಕ್ತರು ಗರ್ಭಗೃಹ ಪ್ರದಕ್ಷಿಣೆಯಲ್ಲಿ ಭಾಗವಹಿಸಿ ಧನ್ಯತಾ ಭಾವ ಅನುಭವಿಸಿದರು. ಇದೇ ವೇಳೆ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿಗೆ ಹನುಮಂತ ವಾಹನೋತ್ಸವ ವೈಭವದಿಂದ ನೆರವೇರಿತು.

    ಗುರುವಾರ ಶೇರ್ತಿಸೇವೆ

    ಶ್ರೀಕೃಷ್ಣ-ಬಲರಾಮರು ಯದುಗಿರಿಗೆ ಆಗಮಿಸಿ ಚೆಲುವನಾರಾಯಣಸ್ವಾಮಿಯನ್ನು ದರ್ಶನ ಮಾಡಿದ ಪ್ರತೀಕವಾಗಿ ನಡೆಯುವ ಶೇರ್ತಿಸೇವೆ ಗುರುವಾರ ನಡೆಯಲಿದೆ. ಮೂಲಮೂರ್ತಿ ಮತ್ತು ಉತ್ಸವ ಮೂರ್ತಿ ವರ್ಷದಲ್ಲೊಮ್ಮೆ ಮಾತ್ರ ಒಂದೇ ಕಡೆ ಆರಾಧನೆಗೊಳ್ಳುವುದು ಶೇರ್ತಿಸೇವೆಯ ವಿಶೇಷವಾಗಿದೆ. ಶೇರ್ತಿಸೇವೆಯ ಕೈಂಕರ್ಯವನ್ನು ಸಂಪ್ರದಾಯದಂತೆ ಶ್ರೀರಂಗಶಲ್ವನಾರಾಯಣನ್‌ರ ಮನೆತನ ನಿರ್ವಹಿಸುತ್ತಾ ಬಂದಿದೆ. ಇದಕ್ಕೂ ಮುನ್ನ ಮಹಾನಿವೇದನ ನಡೆಯಲಿದ್ದು, ಪಂಚಭಕ್ಷ ಪರಮಾನ್ನಗಳನ್ನು ತಯಾರಿಸಿ ಚೆಲುವನಾರಾಯಣಸ್ವಾಮಿಗೆ ಸಮರ್ಪಿಸಲಾಗುತ್ತದೆ. ಅಂದು ದೊಡ್ಡ ದೊಡ್ಡ ಹಂಡೆಗಳಲ್ಲಿ ತಯಾರಿಸಿದ ಪ್ರಸಾದವನ್ನು ದೇವಾಲಯಕ್ಕೆ ಬರುವ ಭಕ್ತರಿಗೆಲ್ಲಾ ವಿತರಿಸಲಾಗುತ್ತದೆ.

    10 ದಿನಗಳ ಕಾಲ ನಡೆದ ವೈರಮುಡಿ ಬ್ರಹ್ಮೋತ್ಸವದಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತರು ಮೇಲುಕೋಟೆಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ವೈರಮುಡಿ ಉತ್ಸವ, ರಥೋತ್ಸವ, ತೆಪ್ಪೋತ್ಸವ ಹಾಗೂ ತೀರ್ಥಸ್ನಾನಗಳಂದು ಭಕ್ತರು ಸಾಗರೋಪಾದಿಯಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದಿದ್ದಾರೆ.

    1 ಮೇಲುಕೋಟೆಯ ಚೆಲುವರಾಯಣಸ್ವಾಮಿಗೆ ಬುಧವಾರ ಮಹಾಭಿಷೇಕ ವೈಭವದಿಂದ ನೆರವೇರಿತು.

    * ಮಹಾಭಿಷೇಕದ ಅರಿಷಿಣ ಅಲಂಕಾರ ವಿವಿಧ ದೃಶ್ಯಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts