ಭರತ್ ಶೆಟ್ಟಿಗಾರ್, ಮಂಗಳೂರು
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಆಗ್ರ ಸ್ಥಾನ ಪಡೆಯುವ ಏಕೈಕ ಗುರಿಯೊಂದಿಗೆ ದ.ಕ-ಉಡುಪಿ ಜಿಲ್ಲೆಯಲ್ಲಿ ಪೈಪೋಟಿ ನಡುವೆ ಅಂತಿಮ ಸಿದ್ಧತೆ ನಡೆಯುತ್ತಿವೆ.
ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನವಾದರೆ, ದ.ಕ. ಜಿಲ್ಲೆಗೆ ಕಳೆದ ಬಾರಿ ಕೈತಪ್ಪಿದ ಮೊದಲ ಸ್ಥಾನವನ್ನು ಮರಳಿ ಪಡೆಯುವ ತವಕ. ದ್ವಿತೀಯ ಪಿಯುಸಿ ಪರೀಕ್ಷಾ ಲಿತಾಂಶದಲ್ಲಿ ಕಳೆದ ಬಾರಿ ಉಡುಪಿ ಜಿಲ್ಲೆ ಶೇ. 92.20 ಅಂಕ ಪಡೆದಿತ್ತು. ದ.ಕ. ಜಿಲ್ಲೆ ಶೇ.90.91 ಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪ್ರಸ್ತುತ ಫಲಿತಾಂಶ ಸುಧಾರಿಸುವ ಜತೆಗೆ ಮೊದಲ ಸ್ಥಾನ ಪಡೆಯಲು ಎರಡೂ ಜಿಲ್ಲೆಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ನಿರಂತರ ಕಾರ್ಯಚಟುವಟಿಗಳು ನಡೆಯುತ್ತಿವೆ.
ಉಡುಪಿಯಲ್ಲಿ 15,100-ದ.ಕ. 34,346 ವಿದ್ಯಾರ್ಥಿಗಳು
ಉಡುಪಿ ಜಿಲ್ಲೆಯಲ್ಲಿ ಈ ಬಾರಿ 15,100 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 13,802 ರೆಗ್ಯುಲರ್ ವಿದ್ಯಾರ್ಥಿಗಳು, 493 ಮರು ಪರೀಕ್ಷೆ ಬರೆಯುವವರು ಹಾಗೂ 805 ಖಾಸಗಿ ವಿದ್ಯಾರ್ಥಿಗಳು. ಕಲಾವಿಭಾಗದಲ್ಲಿ 1,789, ವಾಣಿಜ್ಯ ವಿಭಾಗದಲ್ಲಿ 8,236, ವಿಜ್ಞಾನ ವಿಭಾದಲ್ಲಿ 5,075 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದ.ಕ ಜಿಲ್ಲೆಯಲ್ಲಿ 34,346 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಪೈಕಿ 17,137 ಹುಡುಗರು ಮತ್ತು 17,209 ವಿದ್ಯಾರ್ಥಿನಿಯರು. 30,897 ರೆಗ್ಯುಲರ್ ವಿದ್ಯಾರ್ಥಿಗಳು, 1,264 ಮರು ಪರೀಕ್ಷೆ ಬರೆಯುವವರು ಮತ್ತು 2185 ಖಾಸಗಿ ವಿದ್ಯಾರ್ಥಿಗಳು. ಕಲಾವಿಭಾಗದಲ್ಲಿ 4,532, ವಾಣಿಜ್ಯ ವಿಭಾಗದಲ್ಲಿ 16,237, ವಿಜ್ಞಾನ ವಿಭಾಗದಲ್ಲಿ 13,577 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಸಿದ್ಧತೆ ಹೇಗಿದೆ?
ಎರಡೂ ಜಿಲ್ಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅಂತಹವರಿಗೆ ವಿಶೇಷ ತರಗತಿ ಆಯೋಜಿಸಲಾಗುತ್ತಿದೆ. ಹೆತ್ತ ವರನ್ನು ಕಾಲೇಜಿಗೆ ಕರೆಸಿ ಮಕ್ಕಳ ಕಲಿಕೆಯಲ್ಲಿ ನೆರವಾಗುವ ಕುರಿತು ಕೌನ್ಸೆಲಿಂಗ್ ನಡೆಸಲಾಗಿದೆ. ಉಪನ್ಯಾಸಕರೂ ವಿವಿಧ ಯೋಜನೆಗಳ ಮೂಲಕ ಗರಿಷ್ಠ ಫಲಿತಾಂಶ ಪಡಯುವ ನಿಟ್ಟಿನಲ್ಲಿ ಕೊನೇ ಹಂತಹ ಪ್ರಯತ್ನ ಮಾಡುತ್ತಿದ್ದಾರೆ. ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಗಮನಿಸಿ ಮುಂದಿನ ಹಂತದ ತರಬೇತಿ ನೀಡಲಾಗುತ್ತಿದೆ. ಪ್ರಥಮ ಪಿಯುಸಿ ಪರೀಕ್ಷೆ ಮೊದಲಿಗೆ ನಡೆಯುವುದರಿಂದ ಆ ಸಮಯದಲ್ಲಿ ಕೊಠಡಿ ಕೊರತೆ ನೆಪದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಜೆ ನೀಡದೆ ಕಾಲೇಜಿಗೆ ಕರೆಸಿ, ಪರೀಕ್ಷೆಗೆ ಸಿದ್ಧಗೊಳಿಸಲು ದ.ಕ. ಜಿಲ್ಲಾ ಉಪನಿರ್ದೇಶಕ ವಿಷ್ಣುಮೂರ್ತಿ ಎಲ್ಲ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳಿಗೆ ಪ್ರತಿ ಭಾನುವಾರ ಆಂಗ್ಲ ಭಾಷೆಯ ಪಾಠ ಮಾಡಿ ವಿಶ್ವಾಸ ಮೂಡಿಸುವ ವಿಶ್ವಾಸ ಕಿರಣ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಕಾಲೇಜುಗಳಲ್ಲಿ ಸಂಬಂಧಪಟ್ಟ ಉಪನ್ಯಾಸಕರು ಆಯಾ ವಿಷಯದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಕನಿಷ್ಠ ಉತ್ತೀ ರ್ಣರಾಗುವ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು ನಡೆಸಿದ್ದಾರೆ. ಫಲಿತಾಂಶದಲ್ಲಿ ಪ್ರಥಮ ಸ್ಥಾನ ಉಳಿಸಕೊಳ್ಳುವುದೇ ನಮ್ಮ ಗುರಿ.
ಶ್ರೀಮಾರುತಿ, ಪಪೂ ಇಲಾಖೆ ಉಪನಿರ್ದೇಶಕ, ಉಡುಪಿ
ಹಿಂದಿನ ವರ್ಷಗಳ ಫಲಿತಾಂಶ
ವರ್ಷ ದ.ಕ ಉಡುಪಿ
2014 ಪ್ರಥಮ ದ್ವಿತೀಯ
2015 ಪ್ರಥಮ ದ್ವಿತೀಯ
2016 ಪ್ರಥಮ ದ್ವಿತೀಯ
2017 ದ್ವಿತೀಯ ಪ್ರಥಮ
2018 ಪ್ರಥಮ ದ್ವಿತೀಯ
2019 ದ್ವಿತೀಯ ಪ್ರಥಮ