ಗಜೇಂದ್ರಗಡ (ಗದಗ ಜಿಲ್ಲೆ): ಪಟ್ಟಣದ ಪಿಎಸ್ಐ ಹಾಗೂ ಇಬ್ಬರು ಕಾನ್ಸ್ಟೆಬಲ್ಗಳನ್ನು ಲೋಕಾಯುಕ್ತ ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಆಡಿಸುವವರ ಮೇಲೆ ದಾಳಿ ನಡೆಸಿದ ಪ್ರಕರಣವನ್ನು ಕೈಬಿಡಲು ಆರೋಪಿಗಳಿಂದ ಹಣ ಪಡೆಯುತ್ತಿದ್ದ ವೇಳೆ ಮೂವರೂ ರೆಡ್ಹ್ಯಾಂಡ್ ಆಗಿ ಸಿಕಿಬಿದ್ದಿದ್ದಾರೆ.
ಪಿಎಸ್ಐ ಕಾನ್ಸ್ಟೆಬಲ್ ವಶ ಘಟನೆ ವಿವರ:
ಬೆಟ್ಟಿಂಗ್ ವೇಳೆ ದಾಳಿ ನಡೆಸಿದ್ದ ಪೊಲೀಸರು ಪ್ರಕರಣ ಮುಚ್ಚಿಹಾಕಲು ಮೊದಲು 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ 1.5 ಲಕ್ಷ ರೂ.ಗೆ ವ್ಯವಹಾರ ಕುದುರಿಸಿದ್ದರು. ಪಟ್ಟಣದಲ್ಲಿ 1 ಲಕ್ಷ ರೂ. ಸ್ವೀಕರಿಸುವಾಗ ಪಿಎಸ್ಐ ರಾಘವೇಂದ ಎಸ್. ಹಾಗೂ ಕಾನ್ಸ್ಟೆಬಲ್ ಶರಣಪ್ಪ ಭಜಂತ್ರಿ, ಮಂಜುನಾಥ ಕುರಿ ಎಂಬುವವರನ್ನು ವಶಕ್ಕೆ ಪಡೆದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಿದರು. ಧಾರವಾಡ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿ ಶಂಕರ ರಾಗಿ, ತನಿಖಾಧಿಕಾರಿ ಅಜೀಜ ಕಲಾದಗಿ ನೇತೃತ್ವದ ತಂಡ ದಾಳಿ ನಡೆಸಿತು.