ಅಮೃತಸರ: ದೇಶದ ಎಲ್ಲ ರಾಜ್ಯಗಳಲ್ಲೂ ಸದ್ಯ ವಲಸೆ ಕಾರ್ಮಿಕರು, ಬೇರೆ ರಾಜ್ಯದವರು ಬಂಧಿಯಾಗಿದ್ದಾರೆ. ಲಾಕ್ಡೌನ್ನಿಂದಾಗಿ ಉದ್ಯೋಗವೂ ಇಲ್ಲದೇ, ತಮ್ಮೂರುಗಳಿಗೂ ತೆರಳಲಾಗದೇ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಒಂದು ರೀತಿಯಲ್ಲಿ ತಾವಿರುವ ರಾಜ್ಯಗಳಿಗೂ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿದ್ದಾರೆ. ರಾಜ್ಯದಲ್ಲಿರುವ ವಲಸಿಗರನ್ನು ತಮ್ಮೂರಿಗೆ ಕರೆಯಿಸಿಕೊಳ್ಳಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉತ್ತರಭಾರತದ ರಾಜ್ಯಗಳಿಗೆ ದುಂಬಾಲು ಬಿದ್ದಿದ್ದಾರೆ.
ಆದರೆ, ಪಂಜಾಬ್ ಸರ್ಕಾರ ಮಾತ್ರ ತಮ್ಮವರು ದೇಶದ ಯಾವುದೇ ಭಾಗದಲ್ಲಿ ಸಿಲುಕಿದ್ದರೂ ರಾಜ್ಯಕ್ಕೆ ಕರೆಯಿಸಿಕೊಳ್ಳುತ್ತಿದೆ. ಇದಕ್ಕಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಸೇರಿ ದೇಶದ ವಿವಿಧೆಡೆಗೆ ಬಸ್ಗಳನ್ನು ಕಳುಹಿಸುತ್ತಿವೆ. ಸರ್ಕಾರದ ಈ ಕ್ರಮ ಸಹಜವಾಗಿಯೇ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇತರ ರಾಜ್ಯಗಳಿಗೂ ಇದು ಮಾದರಿ ಎಂದು ಶ್ಲಾಘನೆ ದೊರೆತಿದೆ.
ಮಹಾರಾಷ್ಟ್ರದ ನಾಂದೇಢ್ನ ಹಜೂರ್ ಸಾಹೇಬ್ ಗುರುದ್ವಾರದಲ್ಲಿ ಸಿಲುಕಿದ್ದ 3,800 ಸಿಖ್ಖರನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳಲು 80 ಬಸ್ಗಳನ್ನು ಪಂಜಾಬ್ನಿಂದ ಕಳುಹಿಸಿಕೊಟ್ಟಿದ್ದರು. 3,300 ಕಿ.ಮೀ ಪ್ರಯಾಣಕ್ಕಾಗಿ ಒಂದೊಂದು ಬಸ್ನಲ್ಲಿ ಮೂವರು ಚಾಲಕರು ಹಾಗೂ ಒಬ್ಬ ಪೊಲೀಸ್ನನ್ನು ನಿಯೋಜಿಸಲಾಗಿತ್ತು.
ಇದಷ್ಟೇ ಅಲ್ಲದೇ, ರಾಜಸ್ಥಾನದ ಜೈಸಲ್ಮೇರ್ನಲ್ಲಿ ವಲಸಿಗರಾಗಿದ್ದ 1,000ಕ್ಕೂ ಕಾರ್ಮಿಕರನ್ನು ಪಂಜಾಬ್ಗೆ ಕರೆಯಿಸಿಕೊಳ್ಳಲು ಬಸ್ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೋಚಿಂಗ್ ಸೆಂಟರ್ ತಾಣವಾದ ಕೋಟದಲ್ಲಿ ಸಿಲುಕಿದ್ದ ರಾಜ್ಯದ 152 ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ಗಳನ್ನು ವ್ಯವಸ್ಥೆ ಮಾಡಿಸಿದ್ದಾರೆ.
ಇದೆಲ್ಲದರ ಪರಿಣಾಮವಾಗಿ ಮೊದಲ ಹಂತದಲ್ಲಿ 900ಕ್ಕೂ ಅಧಿಕ ಜನರು ಚಂಡಿಗಢ್ಗೆ ಆಗಮಿಸಿ, ವೈದ್ಯಕೀಯ ತಪಾಸಣೆ ಬಳಿಕ ತಮ್ಮೂರುಗಳಿಗೆ ತೆರಳಿದ್ದಾರೆ.
ಈ ನಡುವೆ, ಮಧ್ಯಪ್ರದೇಶದ ರತ್ಲಾಂ ಎಂಬಲ್ಲಿ ಸಿಲುಕಿದ್ದ ಪಂಜಾಬಿಗಳನ್ನು ಕರೆತರಲು 80 ಬಸ್ಗಳನ್ನು ಕಳುಹಿಸಲಾಗಿತ್ತು. ಈ ಪೈಕಿ ಮಂಜೀತ್ ಸಿಂಗ್ ಎಂಬ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈತ ಖಾಸಗಿ ಬಸ್ ಚಾಲಕನಾಗಿದ್ದರೂ, ಸರ್ಕಾರ ವಹಿಸಿದ ಕೆಲಸದ ಮೇಲೆ ತೆರಳಿದ್ದರಿಂದ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಚಾಲಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪಂಜಾಬಿಗಳು ಎಲ್ಲಿದ್ದರೂ ಅವರನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂಬ ಮಾತಿನಂತೆಯೇ ಅಲ್ಲಿನ ಸಿಎಂ ನಡೆದುಕೊಳ್ಳುತ್ತಿದ್ದಾರೆ.
ಹಬ್ಬಕ್ಕೆ ಎನ್ನುವಂತೆ ಪ್ರತಿವರ್ಷವೂ ಬರುತ್ತಂತೆ ಕರೊನಾ; ಚೀನಾದಿಂದಲೇ ಬಂದಿದೆ ವಾರ್ನಿಂಗ್