ಭೋಪಾಲ್: ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು ಬಹುಮತ ಸಾಬೀತುಪಡಿಸಿದ ಬಳಿಕವಷ್ಟೇ ಅಧಿಕಾರದಲ್ಲಿ ಉಳಿಯಲಿದೆ.
ಇಂದು ವಿಶ್ವಾಸಮತ ಯಾಚನೆ ನಡೆಯಬೇಕಿತ್ತು. ಆದರೆ ಕರೊನಾ ವೈರಸ್ ಹಿನ್ನೆಲೆಯಲ್ಲಿ ಕಲಾಪವನ್ನು ಮಾರ್ಚ್ 26ಕ್ಕೆ ಮುಂದೂಡಲಾಗಿತ್ತು. ಹಾಗಾಗಿ ಸದ್ಯದ ಮಟ್ಟಿಗೆ ಕಮಲನಾಥ್ ಸೇಫ್ ಆಗಿದ್ದರು.
ಆದರೆ ಇದೀಗ ಮಧ್ಯಪ್ರದೇಶ ರಾಜಕೀಯಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ. ಮಾ.17(ಮಂಗಳವಾರ)ರಂದೇ ಬಹುಮತ ಸಾಬೀತು ಪಡಿಸಿ ಎಂದು ರಾಜ್ಯಪಾಲ ಲಾಲ್ ಜೀ ಟಂಡನ್ ಮುಖ್ಯಮಂತ್ರಿ ಕಮಲ್ನಾಥ್ಗೆ ಪತ್ರ ಬರೆದಿದ್ದಾರೆ.
ಮಂಗಳವಾರ ವಿಶ್ವಾಸಮತ ಯಾಚನೆ ಮಾಡಬೇಕು. ಒಂದೊಮ್ಮೆ ಅದಕ್ಕೆ ಒಪ್ಪಿಗೆಯಿಲ್ಲ ಎಂದಾದರೆ ನಿಮ್ಮ ಸರ್ಕಾರಕ್ಕೆ ಬಹುಮತ ಇಲ್ಲ ಎಂದೇ ಪರಿಗಣಿಸಲಾಗುವುದು ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆದಿಟ್ಟುಕೊಂಡಿದ್ದಾರೆ. ಹೀಗಾಗಿ ವಿಶ್ವಾಸಮತ ಯಾಚನೆ ಮಾಡುವುದು ಪ್ರಜಾಪ್ರಭುತ್ವದ ನಿಯಮವಲ್ಲ. ಅಲ್ಲದೆ ಸ್ಪೀಕರ್ ಕಾರ್ಯಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು ಎಂದು ಕಮಲನಾಥ್ ಇಂದು ಬೆಳಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯಪಾಲರು, ನಿಮಗೆ ನಿಗದಿ ಪಡಿಸಲಾಗಿದ್ದ ಅವಧಿಯೊಳಗೆ ಬಹುಮತ ಸಾಬೀತು ಪಡಿಸಬೇಕಿತ್ತು. ಆದರೆ ಅದನ್ನು ಬಿಟ್ಟು ನಿಮ್ಮ ಅಸಮರ್ಥತೆಯನ್ನು ಬಹಿರಂಗಪಡಿಸುವಂತೆ ಪತ್ರ ಬರೆದಿರಿ. ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆದಿಟ್ಟುಕೊಂಡಿದ್ದರಿಂದ ವಿಶ್ವಾಸ ಮತ ಯಾಚನೆ ಮಾಡಲು ಆಗುವುದಿಲ್ಲ. ಪ್ರಜಾಪ್ರಭುತ್ವದ ಲಕ್ಷಣ ಇದಲ್ಲ ಎಂದು ನೀವು ಹೇಳಿದ್ದಕ್ಕೆ ಅರ್ಥವೇ ಇಲ್ಲ. ನಾಳೆ ನೀವು ಬಹುಮತ ಸಾಬೀತು ಮಾಡಲೇಬೇಕು ಎಂದು ಖಡಕ್ ಆಗಿ ತಿಳಿಸಿದ್ದಾರೆ. (ಏಜೆನ್ಸೀಸ್)