ಹೊಸದುರ್ಗ: ವೀರಶೈವ ಲಿಂಗಾಯತ ಸಮಾಜದ ಮುಖಂಡರ ಮೇಲೆ ನಡೆದ ಹಲ್ಲೆ ವಿರೋಧಿಸಿ ಸಮಾಜದ ಮುಖಂಡರು ಹೊಸದುರ್ಗ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿದರು.
ಪುರಸಭೆ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಶನಿವಾರ ಬೆಳಗ್ಗೆ ನಡೆಯುತ್ತಿದ್ದ ಸಿಸಿ ರಸ್ತೆ ಕಾಮಗಾರಿ ವೇಳೆ ಆ ವಾರ್ಡಿನ ಮಾಜಿ ಸದಸ್ಯ ವೃಷಭೇಂದ್ರಪ್ಪ, ಕಾಂಕ್ರಿಟ್ಗೆ ಬಳಸಿದ ಸಿಮೆಂಟ್ ಪ್ರಮಾಣ ಕುರಿತು ಪ್ರಶ್ನಿಸಿದಾಗ ಈ ಪ್ರಕರಣ ನಡೆದಿದೆ.
ಅಲ್ಲಿದ್ದ ಕೆಲಸಗಾರರು ವೃಷಭೇಂದ್ರಪ್ಪ, ಬಿಜೆಪಿ ಮುಖಂಡ ಎಂ.ಪಿ. ರಂಗೇಶ್ ಇತರರ ಮೇಲೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿ ಪೋಲಿಸ್ ಠಾಣೆಗೆ ಬೆಳಗ್ಗೆಯೇ ದೂರು ನೀಡಿದರು.
ಮಧ್ಯಾಹ್ನದ ವೇಳೆ ವೃಷಭೇಂದ್ರಪ್ಪ ಸೇರಿದಂತೆ ಸಮಾಜದ ಮುಖಂಡರು ಎಂಪಿಎಂಸಿ ಮಾಜಿ ಅಧ್ಯಕ್ಷ ಎಚ್.ಸಿ.ಮಲ್ಲಿಕಾರ್ಜುನ್ ಅವರ ಅಂಗಡಿಯಲ್ಲಿ ಸೇರಿದ್ದರು. ಈ ವೇಳೆ 10ಕ್ಕೂ ಹೆಚ್ಚು ಜನರಿದ್ದ ತಂಡ ಬ್ಯಾಟ್, ವಿಕೆಟ್ ಬಳಸಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಾಜದ ಮುಖಂಡರು ಮತ್ತೆ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಹೊಸದುರ್ಗದ ಒಪ್ಪತ್ತಿನ ಸ್ವಾಮಿ ವಿರಕ್ತ ಮಠದಲ್ಲಿ ಸಭೆ ಸೇರಿದರು.
ಸಮಾಜದ ಮೇಲೆ ಪದೇಪದೆ ದೌರ್ಜನ್ಯ ನಡೆಯುತ್ತಿದೆ. ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆಂದು ಆಪಾದಿಸಿ ಠಾಣೆ ಎದುರು ಅಹೋರಾತ್ರಿ ಪ್ರತಿಭಟನೆಗೆ ನಿರ್ಧರಿಸಿದರು. ಠಾಣೆ ಎದುರಿನ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಆರಂಭಿಸುತ್ತಿದ್ದಂತೆ ಮನವೊಲಿಸಲು ಪೊಲೀಸರು ಮುಂದಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡುವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಎಸ್ಪಿ ಪರಶುರಾಮ ಅವರು ವೀರಶೈವ ಮುಖಂಡರ ಜತೆ ಸಭೆ ನಡೆಸಿ ವಿಡಿಯೋ ಸಾಕ್ಷ್ಯ ಆಧರಿಸಿ ಹಲ್ಲೆಕೋರರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವುದಾಗಿ ಹೇಳಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು. ಜಿಪಂ ಮಾಜಿ ಸದಸ್ಯರಾದ ಹನುಮಂತಪ್ಪ, ಡಿ.ಗುರುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಸಿ.ಮಲ್ಲಿಕಾರ್ಜುನ್, ಸಮಾಜದ ಮುಖಂಡರಾದ ಕೆ.ಎಸ್.ಕಲ್ಮಠ್, ಕೋಡಿಹಳ್ಳಿ ತಮ್ಮಣ್ಣ, ಎಚ್.ಆರ್.ಕಲ್ಲೇಶ್, ಬಿ.ಪಿ.ಓಂಕಾರಪ್ಪ, ರಾಗಿ ಶಿವಮೂರ್ತಿ ಇತರರಿದ್ದರು.
ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ
ಪುತ್ರನಿಂದಲೇ ಕೊಲೆಯಾದ ಹಿರಿಯ ನಟಿ; ಬ್ಯಾಟ್ನಿಂದ ಹೊಡೆದು ಕೊಂದು ಶವ ನದಿಗೆಸೆದ ಮಗ!
ಮೇಕಪ್ನಿಂದ ಲುಕ್ ಹಾಳಾಯ್ತು ಅಂತ ಬ್ಯೂಟಿಪಾರ್ಲರ್ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ ವಧು!