ರಾಮನಗರ: ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟನೆಗೆಂದು ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿ ಮೋದಿ ಅವರಿಂದು (ಮಾ.12) ಭೇಟಿ ನೀಡಿದ್ದಾರೆ. ಇದೀಗ ಪ್ರಧಾನಿ ಮೋದಿ ದಶಪಥ ಹೆದ್ದಾರಿಯನ್ನು ಲೋಕಾಪರ್ಣೆಗೊಳಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೆ ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನ ಕುಂಬಳಗೂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 15 ನಿಮಿಷ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮನ; ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಯಾಣ
ನೂತನವಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 118 ಕಿ.ಮೀ ಉದ್ದದ ಮೈ-ಬೆಂ ದಶಪಥ ಹೆದ್ದಾರಿಯನ್ನು ಒಟ್ಟು 8,479 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಮಂಡ್ಯದ ಅಮರಾವತಿ ಹೋಟೇಲ್ ಬಳಿ ಹೆದ್ದಾರಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಮಂಡ್ಯಕ್ಕೆ ಬರುವ ಪ್ರಧಾನಿ ಮೋದಿ ಅವರನ್ನು ವಿವಿಧ ಕಲಾ ತಂಡಗಳು ಸ್ವಾಗತಿಸಲಿವೆ. ಮಧ್ಯಾಹ್ನ 11.40ಕ್ಕೆ ಹೆದ್ದಾರಿ ಲೋಕಾರ್ಪಣೆಗೊಳ್ಳಲಿದೆ. ಮಧ್ಯಾಹ್ನ 12.15 ರಿಂದ 1.15 ರವರೆಗೆ ವೇದಿಕೆ ಕಾರ್ಯಕ್ರಮ ಇರಲಿದೆ. ಮದ್ದೂರಿನ ಗೆಜ್ಜಲಗೆರೆ ಕಾಲನಿ ಬಳಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಅದಕ್ಕೂ ಮುನ್ನ ಮಂಡ್ಯ ನಗರದಲ್ಲಿ 1.8 ಕಿ.ಮೀ ರೋಡ್ ಶೋ ನಡೆಯಲಿದೆ.
ಬೆಳಗ್ಗೆ 11.20ಕ್ಕೆ ಮಂಡ್ಯಕ್ಕೆ ಆಗಮಿಸಲಿರುವ ಮೋದಿ, ಪಿಇಎಸ್ ಕಾಲೇಜು ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬರಲಿದ್ದಾರೆ. ಬೆಳಗ್ಗೆ 11.25ಕ್ಕೆ ಮಂಡ್ಯದ ಪ್ರವಾಸಿ ಮಂದಿರದಿಂದ ರೋಡ್ ಶೋ ಆರಂಭವಾಗಲಿದ್ದು, 11.30ಕ್ಕೆ ಸಂಜಯ್ ವೃತ್ತಕ್ಕೆ ಆಗಮಿಸಲಿದೆ. 11.33 ಕ್ಕೆ ಮಹಾವೀರ್ ವೃತ್ತಕ್ಕೆ ಎಂಟ್ರಿ, 11.37ಕ್ಕೆ ನಂದ ವೃತ್ತಕ್ಕೆ ಎಂಟ್ರಿ ಹಾಗೂ 11.40ಕ್ಕೆ ಅಮರಾವತಿ ಬಳಿ ಇರುವ ಹೆದ್ದಾರಿಗೆ ರೋಡ್ ಶೋ ಎಂಟ್ರಿ ಕೊಡಲಿದೆ.
ಇದನ್ನೂ ಓದಿ: LIVE| ಮಂಡ್ಯದಲ್ಲಿ ಮೋದಿ ಮೇನಿಯಾ: ಕ್ಷಣ ಕ್ಷಣದ ಮಾಹಿತಿಗಾಗಿ ನೇರಪ್ರಸಾರ ವೀಕ್ಷಿಸಿ