ಬೆಂಗಳೂರು: ಎನ್ಪಿಎಸ್ ಹಿಂದೆಗೆದುಕೊಂಡು ಹಳೇ ಪಿಂಚಣಿ ಪದ್ಧತಿಯನ್ನೇ ಮರುಜಾರಿಗೊಳಿಸಲು ಆಗ್ರಹಿಸಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ ಬೆನ್ನಿಗೇ ಇದೀಗ ಆಶಾ ಕಾರ್ಯಕರ್ತೆಯರೂ ಪ್ರತಿಭಟನೆ ನಡೆಸಿದ್ದಾರೆ. ಮಾಸಿಕ ಗೌರವ ಧನ 5 ಸಾವಿರ, ನಿತ್ಯದ ಚಟುವಟಿಕೆ ಧನ 2 ಸಾವಿರ ರೂ. ಹಾಗೂ ಆಶಾನಿಧಿ ಹಣ 5 ಸಾವಿರ ರೂ. ಸೇರಿ ನಿಗದಿತ ಸಮಯಕ್ಕೆ ಒಟ್ಟಿಗೆ ಮಾಸಿಕ 12 ಸಾವಿರ ರೂ. ನೀಡುವುದು ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ನಗರ ಮತ್ತು ಬಿಬಿಎಂಪಿ ಆಶಾ ಕಾರ್ಯಕರ್ತೆಯರು ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಆರ್ಸಿಎಚ್ ಪೋರ್ಟಲ್ನ ಸಮಸ್ಯೆಗಳಿಂದಾಗಿ ಕಳೆದ 2 ವರ್ಷಗಳಿಂದ ಕಾರ್ಯಕರ್ತೆಯರಿಗೆ ಮಾಡಿದ ಕೆಲಸಕ್ಕೆ ಸರಿಯಾಗಿ ಗೌರವಧನ ದೊರೆಯದೆ ಆರ್ಥಿಕವಾಗಿ ನಷ್ಟವಾಗಿದೆ. ಹಾಗಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿರುವಂತೆ 2022ರ ಡಿಸೆಂಬರ್ ನಂತರ ಕೇಂದ್ರ ಪ್ರೋತ್ಸಾಹ ಧನ ಪಾವತಿ ಮಾಡಲಿದ್ದು, ಅದನ್ನು ಆರ್ಸಿಎಚ್ ಪೋರ್ಟ್ಲ್ ಲಿಂಕ್ನಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕರ್ತೆಯರ ಸೇವೆಗೆ ಅನುಗುಣವಾಗಿ ಸೌಲಭ್ಯ ಒದಗಿಸುವಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕಳೆದ 8 ತಿಂಗಳಿಂದ ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಬೇಡಿಕೆಗಳ ಕುರಿತು ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಐದು ಸಭೆಗಳನ್ನು ನಡೆಸಿದ್ದಾರೆ. ಆದರೂ ಯಾವುದೇ ಸೂಕ್ತ ನಿರ್ಣಯ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ಗೌರವಧನ ನೀಡಬೇಕು, ನಿವೃತ್ತಿ ಹೊಂದುವ ಆಶಾ ಕಾರ್ಯಕರ್ತೆಯರಿಗೆ 3 ಲಕ್ಷ ರೂ. ನಿವೃತ್ತಿ ಪರಿಹಾರ ಧನ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ನಿಗದಿಯಾಗಿರುವ ಕೆಲಸಗಳನ್ನು ಹೊರತು ಪಡಿಸಿ ಇತರೆ ಕೆಲಸಗಳನ್ನು ನೀಡಬಾರದು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!