ರಾಯಚೂರು: ಸಿಎಎ ಮತ್ತು ಎನ್ಆರ್ಸಿ ವಿಚಾರದ ಜಾಗೃತಿ ಸಮಾವೇಶದ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ್ದ ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ರಾಯಚೂರಿನಲ್ಲಿ ನಾಗರಿಕ ಸಮಿತಿ ಭಾನುವಾರ ಪ್ರತಿಭಟನೆ ನಡೆಸಿತು.
ರೆಡ್ಡಿ ಅವರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ನಗರದ ಅಂಬೇಡ್ಕರ್ ವೃತ್ತದ ಸಮೀಪ ಜಮಾಯಿಸಿ, ಅವರ ಬಂಧಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಅವರ ಪ್ರತಿಕೃತಿ ದಹನಕ್ಕೆ ಮುಂದಾಗಿದ್ದರು.
ಇದೇ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಕೃತಿ ದಹನಕ್ಕೆ ಅವಕಾಶ ನೀಡಲಿಲ್ಲ. ಈ ಕಾರಣಕ್ಕೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಆದಾಗ್ಯೂ, ಪೊಲೀಸರು ಪ್ರತಿಕೃತಿಯನ್ನು ವಶಪಡಿಸಿ ಕೊಂಡೊಯ್ದರು.