ಬೈಂದೂರು: ಕಿರಿಮಂಜೆಶ್ವರ ಗ್ರಾಮದ ನಾಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ರಳ್ಳಿ ಕೂಡುರಸ್ತೆಗೆ ಅವೈಜ್ಞಾನಿಕ ಯು ಟರ್ನ್ ಕೊಡಲಾಗಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.
ಸಂಬಂಧಿತರು ತಕ್ಷಣ ಈ ವ್ಯವಸ್ಥೆ ಸರಿಪಡಿಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಸೋಮವಾರ ನಾಗೂರು ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಗ್ರಾಪಂ ಮಾಜಿ ಉಪಾಧ್ಯಕ್ಷ ಶೇಖರ ಖಾರ್ವಿ ಮಾತನಾಡಿ, ಪ್ರಯಾಣಿಕರ ವಾಹನಗಳು ಹೆದ್ದಾರಿ ತಲುಪಿದ ತಕ್ಷಣ ಎದುರಾಗುವ ಯು ಟರ್ನ್ ಮೂಲಕ ವಿರುದ್ಧ ದಿಕ್ಕಿನಿಂದ ಸಂಚರಿಸುತ್ತವೆ. ಹೆಚ್ಚಾಗಿ ದ್ವಿಚಕ್ರ ಹಾಗೂ ಕಾರುಗಳು ಅನಿವಾರ್ಯವಾಗಿ ಹೆದ್ದಾರಿಗೆ ಬರುವುದರಿಂದ ಹೈವೇಯಲ್ಲಿ ವೇಗವಾಗಿ ಹೋಗುತ್ತಿರುವ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತವೆ. ಇದಕ್ಕೆಲ್ಲ ಅವೈಜ್ಞಾನಿಕ ಯು ಟರ್ನ್ ಕಾರಣ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ಜಿಎಂ ಪ್ರಮೋದ್ ಸಾವಲ್ಕರ್, ಹೆದ್ದಾರಿ ಅಭಿಯಂತರ ಚೆನ್ನಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲಾಗುವುದು ಎಂದರು. ಇಲಾಖೆಯ ಸುದೇಶ್ ಶೆಟ್ಟಿ, ಪ್ರಫುಲ್ ಪಕ್ಡೆ, ಭೋಜಕರ್, ಡೆಪ್ಯುಟಿ ತಹಸೀಲ್ದಾರ್ ನರಸಿಂಹ ಕಾಮತ್, ಜಿಪಂ ಸದಸ್ಯೆ ಗೌರಿ ದೇವಾಡಿಗ, ರಾಜು ದೇವಾಡಿಗ, ತಬ್ರೇಜ್ ನಾಗೂರು, ಕೃಷ್ಣ, ಈಶ್ವರ ದೇವಾಡಿಗ ಮತ್ತಿತರರು ಇದ್ದರು.