ಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ರೋಟರಿ ಬೃಂದಾವನ, ಸಾಮಾಜಿಕ ನ್ಯಾಯ ವೇದಿಕೆಗಳ ಸಹಯೋಗದೊಡನೆ ನಗರದ ನಂಜನಗೂಡು ತಾಲೂಕಿನ ಬಿಳಿಗಲಿ ಗ್ರಾಮದಲ್ಲಿ ಸಾಕ್ಷರತೆ ಹೆಚ್ಚಳ, ಕೆರೆ ಪುನರುಜ್ಜೀವನ ಮೊದಲಾದ ಸಾಮಾಜಿಕ ಸುಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗ್ರಾಮದಲ್ಲಿ ಒಟ್ಟು 708 ಕುಟುಂಬಗಳು ವಾಸಿಸುತ್ತಿವೆ. ಆದರೆ, ಇಲ್ಲಿನ ಸಾಕ್ಷರತಾ ಪ್ರಮಾಣ ತೀರಾ ಕಡಿಮೆಯಾಗಿದೆ. ಪರಿಶಿಷ್ಟ ಜಾತಿ ಸಮುದಾಯದವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಸಂಸ್ಥೆಗಳ ವತಿಯಿಂದ ಪ್ರತಿ ಮನೆಗೂ ಭೇಟಿ ನೀಡಿ, ಮಹಿಳೆಯರ ಸಬಲೀಕರಣ, ಮಕ್ಕಳ ಶಿಕ್ಷಣ, ಮಹಿಳಾ ಉದ್ಯಮಶೀಲತೆಗೆ ಪ್ರೋತ್ಸಾಹ, ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗಳ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಆಯೋಜಕ ಹರೀಶ್ ಶೆಣೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದಾಧಿಕಾರಿಗಳಾದ ಡಾ.ಯತೀಶ್, ಸತೀಶ್ ಮೇತ್ರಿ, ಶ್ರೀನಿಧಿ ಮೂರ್ತಿ, ಧರ್ಮಾನಂದ, ಎಸ್.ನಾಗೇಶ್, ದೀಪಕ್ ಆರಾಧ್ಯ ಇದ್ದರು.