ಬೆಂಗಳೂರು: ಕರೊನಾ ಹಾವಳಿ ನಂತರ ಕನ್ನಡ ಚಿತ್ರರಂಗದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ ಖೈಮರಾ ಕೂಡ ಒಂದು. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರರ್ ಕಥಾಹಂದರ ಹೊಂದಿರುವ ಖೈಮರಾ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು. ಪ್ರಿಯಾಮಣಿ, ಪ್ರಿಯಾಂಕ ಉಪೇಂದ್ರ ಹಾಗೂ ಛಾಯಾಸಿಂಗ್ ಅವರ ಜೊತೆ ನಿರ್ಮಾಪಕ ಮತಿಯಲಗಾನ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಕರೀನಾ ಕಪೂರ್ ಮನೆಯಲ್ಲಿ ದೀಪಾವಳಿ ಸಂಭ್ರಮ ಶುರು
ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಉಪೇಂದ್ರ, ‘ನಾನು ಚಿತ್ರದ ಕಥೆ ಕೇಳಿದ್ದೀನಿ. ಚಿತ್ರದ ಫಸ್ಟ್ ಲುಕ್ ಸೂಪರ್ ಆಗಿದೆ. ಚಿತ್ರವನ್ನು ಇದೇರೀತಿ ಮಾಡಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರ ಪಿ. ವಿಮಲ್ ಅವರ ಪುತ್ರ ಗೌತಮ್ ವಿ.ಪಿ ಈ ಚಿತ್ರದ ನಿರ್ದೇಶಕರು. ಗೌತಮ್ ಅವರ ತಾತಾ ಪೀತಾಂಭರಂ ಅವರು ಸಹ ಮೇಕಪ್ ಕಲಾವಿದರಾಗಿ, ನಿರ್ಮಾಪಕರಾಗಿ ಹೆಸರು ಮಾಡಿದ್ದವರು.
ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರರ್ ಕಥಾಹಂದರ ಹೊಂದಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕೊಡಗಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮಾಹಿತಿ ನೀಡಿದ್ದ ನಿರ್ದೇಶಕ ಗೌತಮ್, ಖೈಮರಾ ಎಂದರೆ ಏನು ಎಂಬುದು ಚಿತ್ರ ಬಿಡುಗಡೆ ನಂತರ ತಿಳಿಯಲಿದೆ ಎಂದರು.
‘ನಾನು ಮಮ್ಮಿ ಚಿತ್ರದ ನಂತರ ಹಾರರ್ ಚಿತ್ರ ಮಾಡಿಲ್ಲ.. ನಿರ್ದೇಶಕ ಗೌತಮ್ ಅವರು ಹೇಳಿದ ಕಥೆ ನನಗೆ ಬಹಳ ಇಷ್ಟವಾಯಿತು. ಪ್ರಿಯಾಮಣಿ ಹಾಗೂ ಛಾಯಾಸಿಂಗ್ ಅವರೊಡನೆ ಒಟ್ಟಾಗಿ ಈ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಪ್ರಿಯಾಂಕ ಉಪೇಂದ್ರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ವೀಕ್ಷಣೆಯಲ್ಲಿ ‘ದಿಲ್ ಬೇಚಾರಾ’ ದಾಖಲೆಯನ್ನು ಮುರಿದ ‘ಲಕ್ಷ್ಮೀ’
ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಹಣ ಹೂಡುತ್ತಿರುವ ಮತಿಯಲಗಾನ್ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಛಾಯಾಗ್ರಹಕರಾದ ವಿಷ್ಣು ರಾಮಕೃಷ್ಣನ್ ಹಾಗೂ ವಿ ಎಫ್ ಎಕ್ಸ್ ನ ಜೈ ತಮ್ಮ ಅನಿಸಿಕೆ ಹಂಚಿಕೊಂಡರು. ನವೆಂಬರ್ 12 ರಂದು ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಒಂದು ದಿನ ಮುಂಚಿತವಾಗಿ ಖೈಮರಾ ಚಿತ್ರತಂಡದಿಂದ ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬ ಆಚರಿಸಿ ಲೇಡಿ ಮೆಗಾ ಸೂಪರ್ ಸ್ಟಾರ್ ಎಂಬ ಬಿರುದು ನೀಡಲಾಯಿತು.
ಪ್ರಿಯಾಮಣಿ ಹೈದರಾಬಾದ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವುದರಿಂದ ವಿಡಿಯೋ ಮೂಲಕ ಅಭಿಪ್ರಾಯವನ್ನು ಹಂಚಿಕೊಂಡರು. ಉಳಿದಂತೆ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿದೆ.