ಮಹಾರಾಷ್ಟ್ರ: ಸಾಂತಾಕ್ರೂಜ್ನಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ಸೆಲ್ಫಿ ನಿರಾಕರಿಸಿದ ಸಿಟ್ಟಿನಲ್ಲಿ ಇಬ್ಬರು ಯುವಕರು ಕ್ರಿಕೆಟಿಗ್ ಪೃಥ್ವಿ ಶಾ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ(ಫೆ.15) ರಾತ್ರಿ ಮುಂಬೈನ ಪಂಚತಾರಾ ಹೋಟೆಲ್ನಲ್ಲಿ ಪೃಥ್ವಿ ಶಾ ಬಳಿಗೆ ಬಂದ ಇಬ್ಬರು ಸಹಜವಾಗಿಯೇ ಸೆಲ್ಫಿ ಕೇಳಿದ್ದಾರೆ. ಪೃಥ್ವಿ ಶಾ ಸಹಕರಿಸಿದ್ದ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವಕರು ಮತ್ತೆ ಮತ್ತೆ ಸೆಲ್ಫಿಗೆ ಫೋಸ್ ಕೊಡುವಂತೆ ಕೇಳಿಕೊಂಡಿದ್ದು, ಇದಕ್ಕೆ ಪೃಥ್ವಿ ಶಾ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾದ ಯುವಕರು ಪೃಥ್ವಿ ಶಾ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬೇಸ್ಬಾಲ್ ಬ್ಯಾಟ್ಗಳಿಂದ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪೃಥ್ವಿ ಶಾ ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ನೀಡಿದ ದೂರಿನ ವೇಳೆ ಪೊಲೀಸರಲ್ಲಿ, ಆರೋಪಿಗಳು ಕಾರನ್ನು ಹಿಂಬಾಲಿಸಿ ಹಣ ನೀಡದಿದ್ದರೆ ಸುಳ್ಳು ಕೇಸು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪೃಥ್ವಿ ಶಾ ಪಂಚತಾರಾ ಹೋಟೆಲ್ಗೆ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದರು. ಪೃಥ್ವಿ ಶಾ ಸೆಲ್ಫಿಗೆ ನಿರಾಕರಿಸಿದ್ದು, ನಾನು ಸ್ನೇಹಿತರೊಂದಿಗೆ ಊಟ ಮಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಯುವಕರು ಒತ್ತಾಯಿಸಿದಾಗ ಪೃಥ್ವಿ ಶಾ ಸ್ನೇಹಿತ ಹೋಟೆಲ್ ಮ್ಯಾನೇಜರ್ಗೆ ದೂರು ನೀಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೂಡಲೇ ಮ್ಯಾನೇಜರ್ ಆರೋಪಿಗಳನ್ನು ಹೊಟೇಲ್ನಿಂದ ಹೊರಹೋಗುವಂತೆ ಹೇಳಿದ್ದಾರೆ. ಸಿಟ್ಟಾದ ಆರೋಪಿಗಳು ಬೇಸ್ಬಾಲ್ ಬ್ಯಾಟ್ಗಳನ್ನು ಬಳಸಿ ವಾಹನದ ಮುಂಭಾಗ ಮತ್ತು ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದರಿಂದ ಪೃಥ್ವಿ ಅವರ ಸ್ನೇಹಿತನ ಕಾರಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)