ಮುಂಬೈ: ಕರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ತುರ್ತು ಪರಿಹಾರ ನಿಧಿಯನ್ನು ಸ್ಥಾಪಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನಾಗರಿಕರು ಸಾಧ್ಯವಾದಷ್ಟು ಸಹಾಯ ಮಾಡಿ ಎಂದು ಹೇಳಿದ್ದಾರೆ. ಹಾಗೇ ಕೆಲವು ಸೆಲೆಬ್ರಿಟಿಗಳು, ಶ್ರೀಮಂತರು ನೆರವು ನೀಡುತ್ತಿದ್ದಾರೆ.
ಉದ್ಯಮಿ ರತನ್ ಟಾಟಾ ತಾವು 500 ಕೋಟಿ ರೂ.ನೀಡುವುದಾಗಿ ಘೋಷಿಸಿದ್ದರು. ಆದರೆ ಟಾಟಾ ಅವರ ಮಕ್ಕಳು ಹೆಚ್ಚುವರಿಯಾಗಿ 1000 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ಅಲ್ಲಿಗೆ ರತನ್ ಟಾಟಾ ಟ್ರಸ್ಟ್ನಿಂದ ಕರೊನಾ ವಿರುದ್ಧದ ಹೋರಾಟಕ್ಕೆ 1500 ಕೋಟಿ ರೂ.ಆರ್ಥಿಕ ನೆರವು ಸಿಗಲಿದೆ.
ನಟ ಅಕ್ಷಯ್ ಕುಮಾರ್ ಸಹ ಪ್ರಧಾನಮಂತ್ರಿ ಕರೊನಾ ವೈರಸ್ ಪರಿಹಾರ ನಿಧಿಗೆ 25 ಕೋಟಿ ರೂ. ನೀಡುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈಗ ಅದೇ ಸಾಲಿಗೆ ಕ್ರಿಕೆಟರ್, ಟೀಂ ಇಂಡಿಯಾ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಕೂಡ ಸೇರಿದ್ದಾರೆ. ಕೊವಿಡ್-19 ವಿರುದ್ಧ ಹೋರಾಡಲು ತಾವು 52 ಲಕ್ಷ ರೂಪಾಯಿ ಕೊಡುತ್ತೇನೆ ಎಂದಿದ್ದಾರೆ.
ಟ್ವೀಟ್ ಮಾಡಿರುವ ಅವರು, ಕರೊನಾ ವೈರಸ್ ನಿರ್ಮೂಲನೆಗಾಗಿ 52 ಲಕ್ಷ ರೂ. ನೆರವು ನೀಡುತ್ತೇನೆ. ಅದರಲ್ಲಿ 31 ಲಕ್ಷ ರೂ. ಪ್ರಧಾನಮಂತ್ರಿ ಕರೊನಾ ವೈರಸ್ ಪರಿಹಾರ ನಿಧಿಗೆ ಮತ್ತು 21 ಲಕ್ಷ ರೂ.ನ್ನು ಉತ್ತರಪ್ರದೇಶ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಕೊಡುತ್ತೇನೆ ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ. ಹಾಗೇ..ನಿಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟನ್ನು ದೇಣಿಗೆ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿ, ಮನೆಯಲ್ಲೇ ಇರಿ ಎಂದಿದ್ದಾರೆ.
52 ಲಕ್ಷ ರೂ. ನೀಡಿದ ಸುರೇಶ್ ರೈನಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್ ಭಾಷೆಯಲ್ಲಿಯೇ ಕೃತಜ್ಞತೆ ಸಲ್ಲಿಸಿದ್ದಾರೆ. ಇದೊಂದು ಸಾರ್ಥಕ, ಅದ್ಭುತ ಫಿಫ್ಟಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಲಾಕ್ ಡೌನ್ ನಿಮಿತ್ತ ಮಾಧ್ಯಮವೊಂದು ಹಮ್ಮಿಕೊಂಡಿದ್ದ I stay home ಅಭಿಯಾನದಲ್ಲಿ ಕೂಡ ಸುರೇಶ್ ರೈನಾ ಪಾಲ್ಗೊಂಡಿದ್ದಾರೆ.
ಮನೆಯಲ್ಲಿ ಇದ್ದು ಕರೊನಾದಿಂದ ನಾವು ಪಾರಾಗೋಣ, ನಮ್ಮ ಕುಟುಂಬವನ್ನು ರಕ್ಷಿಸೋಣ ಎಂಬಂತಹ ಪೋಸ್ಟರ್ ಗಳನ್ನು ಹಿಡಿದು, ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.(ಏಜೆನ್ಸೀಸ್)