ಬೆಂಗಳೂರು: ಅಪರಿಚಿತ ವ್ಯಕ್ತಿಗಳನ್ನು ನಂಬೋ ಮುಂಚೆ ಎಚ್ಚರ. ಮನೆಯ ಮಗನಂತೆ ನೋಡಿಕೊಂಡರೂ, ಕೋಟಿಗೂ ಅಧಿಕ ಹಣವನ್ನು ಈತ ಲಪಟಾಯಿಸಿ ಓಡಿ ಹೋಗಿದ್ದಾನೆ!
ಬೆಂಗಳೂರಿನ ಪ್ರತಿಷ್ಠಿತ ಮಠದ ರಾಘವೇಂದ್ರ ಎನ್ನುವ ಅರ್ಚಕರೊಬ್ಬರು ಮಠಕ್ಕೆ ಸಹಾಯಕನ ರೂಪದಲ್ಲಿ ಬಂದವನಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದರು. ಈತ ಮಾತ್ರ ಮಾಡಿದ್ದು ಘೋರ ವಂಚನೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶೇಷಗಿರಿ (45) ಎಂದು ಗುರುತಿಸಲಾಗಿದ್ದು ಈತ ಮೂಲತಃ ಚೆನ್ನೈಯವನು. ಶೇಷಗಿರಿ ತಮಿಳುನಾಡಿನಲ್ಲಿ ಬಿಕಾಂ ಪರೀಕ್ಷೆ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಈತ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಕೆಲಸ ಮಾಡಿ ಶೇರು ಮಾರುಕಟ್ಟೆ ಬಗ್ಗೆ ತಿಳಿದುಕೊಂಡಿದ್ದ.
ಇದನ್ನೂ ಓದಿ: ಲಾಟರಿ ಹೆಸರಲ್ಲಿ 14 ಲಕ್ಷ ರೂ. ವಂಚನೆ
2021ರಲ್ಲಿ ಬೆಂಗಳೂರಿಗೆ ಬಂದ ಈತನಿಗೆ ಮಠದಲ್ಲಿ ಅರ್ಚಕರಾಗಿದ್ದ ರಾಘವೇಂದ್ರ ಎನ್ನುವವರು ಪರಿಚಯವಾಗಿದ್ದರು. ನಂತರ ಅರ್ಚಕರ ಜೊತೆ ಆತ್ಮೀಯತೆ ಗಳಿಸಿ ಅವರಿಂದ ಹಣ ಪಡೆದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾನೆ. ಶೇಷಗಿರಿ ನಡವಳಿಕೆಯಿಂದ ಮನಸೋತ ರಾಘವೇಂದ್ರ, ಮನೆಮಗನಂತೆ ನೋಡಿಕೊಂಡಿದ್ದ. ನಂಬಿಕೆ ಗಳಿಸಿಕೊಂಡ ಶೇಷಗಿರಿ, ರಾಘವೇಂದ್ರರಿಂದ ಪ್ರಾಪರ್ಟಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಶೇರುಮಾರುಕಟ್ಟೆಗೆ ಹೂಡಿಕೆ ಮಾಡಿದ್ದಾನೆ.
ಆರೋಪಿ ಶೇಷಗಿರಿ, ವಿವಿಧ ಹಂತಗಳಲ್ಲಿ ಒಂದು ಕೋಟಿ ಏಳು ಲಕ್ಷ ರೂ. ಹಣ ಪಡೆದಿದ್ದ. ಆದರೆ, ಹೂಡಿಕೆ ಮಾಡಿದ ಹಣ ಶೇರು ಮಾರುಕಟ್ಟೆಯಲ್ಲಿ ಮುಳುಗಿಹೊಗಿದ್ದು, ಬಳಿಕ ಹಣ ವಾಪಾಸ್ ಮಾಡದೇ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಇ-ಸ್ಟೋರ್ ಮಾಡಿಕೊಡುವುದಾಗಿ ಹೇಳಿ 2 ಕೋಟಿ ರೂ. ವಂಚನೆ
ತನಿಖೆ ವೇಳೆ ಮತ್ತೊಂದು ಕರ್ಮಕಾಂಡ ಬಯಲು!
ಬಳಿಕ ಕುರಿತಾಗಿ ಬನಶಂಕರಿ ಠಾಣೆಯಲ್ಲಿ ರಾಘವೇಂದ್ರ ಅವರು ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ತನಿಖೆಗೆ ಒಳಪಡಿಸಿದಾಗ ಆತ ಮಾಡಿದ್ದ ಮತ್ತೊಂದು ಕೃತ್ಯ ಬಯಲಾಗಿದೆ! ಈತ ಅರ್ಚಕರಿಗೆ ತಿಳಿಯದಂತೆ ಸ್ವಂತ ಪ್ರಾಪರ್ಟಿ ಸಹ ಸೇಲ್ ಡೀಡ್ ಮಾಡಿಕೊಂಡಿದ್ದ ಬಗ್ಗೆ ಪೊಲೀಸರು ಪತ್ತೆ ಮಾಡಿದ್ದಾರೆ. ಬಳಿಕ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ತಮಿಳುನಾಡಿನಲ್ಲಿದ್ದ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಸದ್ಯ ಬಂಧಿತನಿಂದ 45 ಲಕ್ಷ ರೂ. ಹಣ ಹಾಗೂ ಜಾಗದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.