ಚನ್ನಗಿರಿ: ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳು ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಚನ್ನಗಿರಿ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಮಾಡಾಳು ಮನೆ ಎದುರು ಗುರುವಾರ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ‘ನಮಗೊಂದಿಷ್ಟು ವಿಷ ಕೊಡಿ ಇಲ್ಲವೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ’ಎಂದು ಮಲ್ಲಿಕಾರ್ಜುನ್ ಅವರಿಗೆ ಒತ್ತಡ ಹೇರಿದರು.
ಇದನ್ನೂ ಓದಿ: ಬಿಜೆಪಿ 2ನೇ ಪಟ್ಟಿ ಬಿಡುಗಡೆ; ಈಶ್ವರಪ್ಪ, ಜಗದೀಶ್ ಶೆಟ್ಟರ್ ಕ್ಷೇತ್ರ ಇನ್ನೂ ಸಸ್ಪೆನ್ಸ್
“ಬಿಜೆಪಿ ಟಿಕೆಟ್ ಕೊಡದಿದ್ದರೆ ಏನಾಯ್ತು? ಚಿಂತೆ ಮಾಡಬೇಡಿ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ. ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮಗೆ ಬಿಡಿ” ಎಂದು ಬೆಳಗ್ಗೆಯಿಂದ ಸಂಜೆ ವರೆಗೆ ಮನೆ ಎದುರು ಧರಣಿ ಕುಳಿತರು. “ಬಿಜೆಪಿ ನಿಷ್ಠಾವಂತರನ್ನು ಕೈಬಿಡುವುದಿಲ್ಲ. ನನಗೇ ಟಿಕೆಟ್ ಸಿಗುತ್ತದೆ ಎಂದು ಕಳೆದ ಹದಿನೈದು ದಿನಗಳಿಂದ ನಮ್ಮನ್ನು ನಂಬಿಸಿದ್ದೀರಿ. ಈಗ ಟಿಕೆಟ್ ಬೇರೆಯವರ ಪಾಲಾಗಿದೆ. ನಿಮ್ಮನ್ನು ನಂಬಿದ ನಾವು ಎಲ್ಲಿ ಹೋಗಬೇಕು? ನೀವು ಸ್ಪರ್ಧಿಸದಿದ್ದರೆ ಯಾವುದೇ ಕಾರಣಕ್ಕೂ ಬೇರೆಯವರಿಗೆ ಮತ ಹಾಕುವುದಿಲ್ಲ. ಮತದಾನವನ್ನೇ ಬಹಿಷ್ಕರಿಸುತ್ತೇವೆ” ಎಂದರು.
ಕಾರ್ಯಕರ್ತರು,ಅಭಿಮಾನಿಗಳು ತೋರಿದ ಅಭಿಮಾನಕ್ಕೆ ನಿರುತ್ತರರಾದ ಮಲ್ಲಿಕಾರ್ಜುನ್ ನಿಮ್ಮ ಪ್ರೀತಿಗೆ ನನ್ನ ಹೃದಯ ಭಾರವಾಗಿದೆ ಎಂದು ಭಾವುಕರಾಗಿ ಕೈ ಮುಗಿದರು. ಈ ವೇಳೆ ಪಕ್ಷದ ಮುಖಂಡರಾದ ಶಿವಕುಮಾರ್ ಮತ್ತು ಶ್ರೀಧರ ಅವರು ಮಾತನಾಡಿ, “ಬಿಜೆಪಿ ಟಿಕೆಟ್ ಕೊಡದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿ. ೪೦ ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ” ಎಂದರು.
ಇದನ್ನೂ ಓದಿ: ಗಳಿಕೆಯ ಜತೆಗೆ ಸಾಲವೂ ಹೆಚ್ಚಳ! ನಾಮಪತ್ರ ಸಲ್ಲಿಕೆ ವೇಳೆ ಮುರುಗೇಶ್ ನಿರಾಣಿ ಘೋಷಿಸಿದ ಆಸ್ತಿ ವಿವರ ಹೀಗಿದೆ…
ಮೋದಿ, ಬಿಎಸ್ವೈ ಮೇಲೆ ನಂಬಿಕೆ
ಎಲ್ಲರನ್ನೂ ಸಮಾಧಾನಪಡಿಸಿ ಮಾತನಾಡಿದ ಮಾಡಾಳು ಮಲ್ಲಿಕಾರ್ಜುನ್, “ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನನಗೆ ನಂಬಿಕೆ ಇದೆ. ಶುಕ್ರವಾರ ಬೆಂಗಳೂರಿಗೆ ಹೋಗಿ ಪಕ್ಷದ ಹಿರಿಯರು, ಮುಖಂಡರನ್ನು ಭೇಟಿ ಮಾಡಿ ಮಾತನಾಡುವೆ” ಎಂದು ತಿಳಿಸಿದರು. “ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹಿರಿಯ ನಾಯಕರು ಪೋನ್ ಕರೆ ಮಾಡಿ ಮಾತನಾಡಿದ್ದಾರೆ. ಸದ್ಯದ ಮಟ್ಟಿಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ದಯವಿಟ್ಟು ಸಹಕರಿಸಿ” ಎಂದರು.