ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಶಿಕ್ಷಣ ಸಚಿವಾಲಯ ಎಂದು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ. ಈ ಸಂಬಂಧ ಅಧಿಸೂಚನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅಂಕಿತ ಹಾಕಿದ್ದಾರೆ. ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಸಿದ್ಧಪಡಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಈ ಮರುನಾಮಕರಣದ ಸಲಹೆಯನ್ನು ನೀಡಲಾಗಿತ್ತು. ಅದೀಗ ಅನುಷ್ಠಾನಗೊಂಡಂತಾಗಿದೆ.
ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಜುಲೈ 29ರ ಸಭೆಯಲ್ಲಿ ಅನುಮೋದಿಸಿತ್ತು. ಸಚಿವಾಲಯದ ವೆಬ್ಸೈಟ್ ಮತ್ತು ಶಿಕ್ಷಣ ಸಚಿವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ಬದಲಾವಣೆ ಆಗಸ್ಟ್ 4ರಂದೇ ಆಗಿತ್ತು. ಸರ್ಕಾರಿ ಯಂತ್ರಕ್ಕೆ ಸಂಬಂಧಿಸಿದ ಬದಲಾವಣೆಗಳಿಗೆ ಕ್ಯಾಬಿನೆಟ್ ತೀರ್ಮಾನವಾದರೂ ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಬೀಳಬೇಕಾದುದು ಅತ್ಯಂತ ಅಗತ್ಯವಾದುದಾಗಿದೆ. ಇದರಂತೆ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಆಗಸ್ಟ್ 14ರಂದು ಈ ಮರುನಾಮಕರಣಕ್ಕೆ ಸಮ್ಮತಿ ಸೂಚಿಸಿದರು. ಈ ಸಂಬಂಧಿತ ಗಝೆಟ್ ನೋಟಿಫಿಕೇಶನ್ ಸೋಮವಾರ ಪ್ರಕಟವಾಗಿದೆ.
ಇದನ್ನೂ ಓದಿ: ಡಿಜೆಹಳ್ಳಿ ಗಲಭೆ: ಪಾಷಾಗೆ ಐಸಿಸ್ ನಂಟು? ಕಾರ್ಪೋರೇಟರ್ಗಳ ಮೇಲೂ ಪೊಲೀಸರ ಕಣ್ಣು- ನೋಟಿಸ್ ಜಾರಿ
ಇಸ್ರೋದ ಮಾಜಿ ಚೇರ್ಮನ್ ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಹೊಣೆಗಾರಿಕೆಯನ್ನು ಸರ್ಕಾರ ನೀಡಿತ್ತು. ಅದು ನೀಡಿದ ಮೊದಲ ಸಲಹೆಯೇ ಸಚಿವಾಲಯದ ಮರುನಾಮಕರಣವಾಗಿತ್ತು. 2018ರಲ್ಲಿ ಇಂಥದ್ದೇ ಚಿಂತನೆಯನ್ನು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ನ ಚೇರ್ಮನ್ ಆಗಿದ್ದ ರಾಮ್ ಬಹಾದುರ್ ರಾಯ್ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)
ಗೋವಾ ರಾಜ್ಯಪಾಲರು ಮೇಘಾಲಯಕ್ಕೆ, ಮಹಾ ರಾಜ್ಯಪಾಲರಿಗೆ ಗೋವಾ ಹೆಚ್ಚುವರಿ ಹೊಣೆಗಾರಿಕೆ