ಉಡುಪಿ: ಹಸಿರು ಪೀಠ ನಿರ್ದೇಶನದ ಮೇರೆಗೆ ಪರಿಸರ ಇಲಾಖೆ ಸೂಚನೆಯಂತೆ ಗೋಸಾಕಣಿಕೆಗೆ ಪೂರ್ವಾನುಮತಿ ಪಡೆಯುವ ನಿಯಮ ಸರಿಯಲ್ಲ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಶುಕ್ರವಾರ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಜರುಗಿದ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಸಹಕಾರ ಸಂಘಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟಲೈಸೇಶನ್ ಮತ್ತು ಸಾಮಾಜಿಕ ಜಾಲತಾಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗೋಸಾಕಣೆ ಈ ನೆಲದ ಸಂಸ್ಕೃತಿಯಾಗಿದೆ. ಕೋಟ್ಯಂತರ ಮಂದಿ ಗೋವುಗಳ ಸಾಕಣೆ ಜತೆಯಲ್ಲಿ ಕೃಷಿ ಚಟುವಟಿಕೆಯೊಂದಿಗೆ ಬದುಕು ರೂಪಿಸಿಕೊಂಡಿದ್ದಾರೆ. ಈಗ ಗೋ ಸಾಕಣೆಗೆ ಪೂರ್ವಾನುಮತಿ ಪಡೆಯುವ ವಿಚಾರವನ್ನು ಕೃಷಿಕರೂ ಸೇರಿದಂತೆ ಎಲ್ಲ ಸಹಕಾರಿಗಳೂ ಒಕ್ಕೊರಲಿನಿಂದ ವಿರೋಧಿಸಬೇಕು ಎಂದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಸದೃಢವಾಗಿದೆ. ಇಲ್ಲಿನ ಪ್ರಮುಖ ಸಹಕಾರಿ ಸಂಸ್ಥೆಗಳಾದ ಎಸ್ಸಿಡಿಸಿಸಿ ಬ್ಯಾಂಕ್, ಕ್ಯಾಂಪ್ಕೊ ಮತ್ತು. ದ.ಕ. ಹಾಲು ಉತ್ಪಾದಕರ ಒಕ್ಕೂಟ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಡಾ.ದೇವಿಪ್ರಸಾದ ಶೆಟ್ಟಿ, ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕರಾದ ಕೆ. ಪಿ. ಸುಚರಿತ ಶೆಟ್ಟಿ, ನರಸಿಂಹ ಕಾಮತ್, ಸುಧಾಕರ ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಹಾಲು ಉತ್ಪಾದಕರ ಒಕ್ಕೂಟ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಇದ್ದರು. ಒಕ್ಕೂಟ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ. ಸುರೇಶ್ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ್ ನಿರೂಪಿಸಿದರು.
ಡಿಜಿಟಲೈಸೇಶನ್ ಪರಿಣಾಮಕಾರಿ ಬಳಕೆ: ದ.ಕ, ಹಾಲು ಉತ್ಪಾದಕರ ಒಕ್ಕೂಟ ಡಿಜಿಟಲೈಸೇಶನ್ ಪರಿಣಾಮಕಾರಿಯಾಗಿ ಬಳಸುತ್ತಿದೆ. ಕ್ಲೌಡ್ ತಂತ್ರಜ್ಞಾನ ಮೂಲಕ ಎಲ್ಲ ನಂದಿನಿ ಡೀಲರ್ಗಳು ಮೊಬೈಲ್ ಆ್ಯಪ್ ಮೂಲಕ ಉತ್ಪನ್ನಗಳ ಬೇಡಿಕೆ ಸಲ್ಲಿಸಲು ಸಾಧ್ಯವಾಗಿದೆ. ಕಾಮನ್ ಸಾಫ್ಟ್ವೇರ್ ಮೂಲಕ ಹೈನುಗಾರರಿಗೆ ಮಾಹಿತಿ ನೀಡಲುದ್ದೇಶಿಸಲಾಗಿದೆ ಎಂದು ಒಕ್ಕೂಟ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಹೇಳಿದರು.