ಬೆಂಗಳೂರು: ‘ಪ್ರೇಮಂ ಪೂಜ್ಯಂ’ ನಂತರ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ ‘ನೆನಪಿರಲಿ’ ಪ್ರೇಮ್. ಒಳ್ಳೆಯ ಪಾತ್ರದ ಹುಡುಕಾಟದಲ್ಲಿರುವುದಾಗಿ ಹೇಳಿಕೊಂಡಿದ್ದ ಅವರು, ಇದೀಗ ಹೆಸರಿಡದ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಹೀರೋ ಎನ್ನುವುದಕ್ಕಿಂತ, ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: 2023ರ ಆಸ್ಕರ್ ನಾಮಿನೇಷನ್ ಪಟ್ಟಿ ಪ್ರಕಟ; ಆರ್ಆರ್ಆರ್ ಸೇರಿ ಆಸ್ಕರ್ಗೆ ಮೂರು ಭಾರತೀಯ ಸಿನಿಮಾಗಳು
ಕೆ.ಆರ್.ಎಸ್ ಪ್ರೊಡಕ್ಷನ್ಸ್ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಅಥರ್ವ ಆರ್ಯ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದ್ದು, ಚಿತ್ರದಲ್ಲಿ ಸಂಜಯ್ ಹಾಗೂ ಜೀವಿತ ವಸಿಷ್ಠ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿರುವ ಪ್ರೇಮ್, ‘ತಬಲ ನಾಣಿ ಮತ್ತು ಸ್ನೇಹಿತರು ಮೊದಲ ಬಾರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮ ಸಂಸ್ಥೆಯ ಮೊದಲ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎನ್ನೋದು ಅವರ ಆಸೆಯಂತೆ. ಅದರಂತೆ ಹೊಸ ನಿರ್ದೇಶಕ, ನಟ, ನಟಿಗೆ ಅವಕಾಶ ನೀಡಿದ್ದಾರೆ. ನಾನೂ ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ. ಚಿತ್ರದ ಕಥೆ ಕೇಳಿ ತುಂಬಾ ಇಷ್ಟ ಆಯ್ತು. ಸಿನಿಮಾದಲ್ಲಿ ತುಂಬಾ ಚೆನ್ನಾಗಿರೋ ಟ್ವಿಸ್ಟ್ ಇದೆ. ನನ್ನ ಪಾತ್ರ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಯಾರಿಗೂ ಈ ಪಾತ್ರ ಬಿಟ್ಟುಕೊಡಬಾರದು ನಾನೇ ಮಾಡಬೇಕು ಎಂದು ಇಷ್ಟಪಟ್ಟು ಮಾಡುತ್ತಿರುವ ಪಾತ್ರವಿದು’ ಎನ್ನುತ್ತಾರೆ ಪ್ರೇಮ್,
ತಬಲ ನಾಣಿ ತಮ್ಮ ಸ್ನೇಹಿತರೊಂದಿಗೆ ಈ ಚಿತ್ರ ನಿರ್ಮಿಸುತ್ತಿದ್ದಾರೆ. ‘ಈ ಚಿತ್ರದ ಕಥೆ ಅಥರ್ವ ಆರ್ಯ ಬರೆದಿದ್ದು, ಸಂಭಾಷಣೆಯನ್ನು ನಾನು ಹಾಗೂ ಅವರು ಸೇರಿ ಬರೆದಿದ್ದೇವೆ. ಚಿತ್ರದಲ್ಲಿ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ 45ರಿಂದ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಮಕ್ಕಳಿಂದಲೇ ನಿರ್ಮಾಣವಾದ ಮಕ್ಕಳ ಸಿನಿಮಾ ‘ನಿರ್ಮಲ’ ಬ್ಯಾಂಕಾಕ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ
ಅಥರ್ವ ಆರ್ಯ ಇದಕ್ಕೂ ಮುನ್ನ ‘ಜೂಟಾಟ’ ಮತ್ತು ‘ಗುಬ್ಬಚ್ಚಿ’ ಸಿನಿಮಾಗಳನ್ನು ನಿರ್ದೇಶಿಸಿದ್ದು, ಇದವರ ಮೂರನೆಯ ಚಿತ್ರವಾಗಿದೆ. ಅವರು ಹೇಳುವಂತೆ, ತಂದೆಯ ಮಹತ್ವ ಸಾರುವ ಸಿನಿಮಾ ಇದಂತೆ. ‘ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆಗೆ ಬೆಲೆ ಸಿಗದೇ ಇದ್ದಾಗ, ಆತ ಕಡೆಗಣನೆಗೆ ಒಳಗಾದಾಗ ಆತ ಏನೆಲ್ಲ ಅನುಭವಿಸುತ್ತಾನೆ ಎನ್ನುವುದು ಚಿತ್ರದ ಕಥೆ’ ಎನ್ನುತ್ತಾರೆ. ಚಿತ್ರಕ್ಕೆ ನಾಗಾರ್ಜುನ ಅವರ ಛಾಯಾಗ್ರಹಣ ಮತ್ತು ಆಕಾಶ್ ಪರ್ವ ಅವರ ಸಂಗೀತವಿದೆ.