ಭೋಪಾಲ್: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ನಡೆದಿದೆ. ಊರಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಈ ರೀತಿ ಮಾಡಬೇಕಾದ ಪರಿಸ್ಥಿತಿ ಬಂದಿರುವುದಾಗಿ ಹೇಳಲಾಗಿದೆ.
ಬಾರ್ವಾನಿ ಜಿಲ್ಲೆಯ ರಾಜ್ಪುರ ಗ್ರಾಮದ ನಿವಾಸಿ ಸುನಿತಾ (20)ಗೆ ಗುರುವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆ ಊರವರಿಗೆ ಹತ್ತಿರದ ಆಸ್ಪತ್ರೆಯೆಂದರೆ ಅದು 28 ಕಿಮೀ ದೂರದಲ್ಲಿರುವ ಆಸ್ಪತ್ರೆ. ಆದರೆ ಆ ಆಸ್ಪತ್ರೆಗೆ ತೆರಳಬೇಕೆಂದರೆ ಅವರು ಮೊದಲು 8 ಕಿಮೀ ದೂರ ನಡೆದೇ ಹೋಗಬೇಕು. ಅಲ್ಲಿಂದ ಮುಂದೆ ರಸ್ತೆ ವ್ಯವಸ್ಥೆ ಇದೆ.
ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸುನಿತಾಳನ್ನು ಆಸ್ಪತ್ರೆಗೆ ಸೇರಿಸಲು ಉಪಾಯವೊಂದನ್ನು ಮಾಡಿದ್ದಾರೆ. ಮರದ ತುಂಡೊಂದಕ್ಕೆ ಬೆಡ್ಶೀಟ್ನ ಎರಡೂ ತುದಿಯನ್ನು ಕಟ್ಟಿ, ಜೋಳಿಗೆ ರೀತಿ ಮಾಡಿಕೊಂಡು ಅದರೊಳಗೆ ಸುನಿತಾಳನ್ನು ಮಲಗಿಸಲಾಗಿದೆ. ನಂತರ ಅದನ್ನು ಹೊತ್ತಿಕೊಂಡು ಎಂಟು ಕಿಮೀ ದೂರ ನಡೆಯಲಾಗಿದೆ. ಮೊದಲೇ ಕರೆ ಮಾಡಿ ತಿಳಿಸಿದ್ದರಿಂದ ರಸ್ತೆಗೆ ಆ್ಯಂಬುಲೆನ್ಸ್ ಬಂದು ನಿಂತಿದ್ದು, ಅಲ್ಲಿಂದ 20 ಕಿಮೀ ದೂರದ ಆಸ್ಪತ್ರೆಗೆ ಆಕೆಯನ್ನು ಆ್ಯಂಬುಲೆನ್ಸ್ ಹೊತ್ತೊಯ್ದಿದೆ.
ಸುನಿತಾ ಶುಕ್ರವಾರದಂದು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯದಿಂದ ಇರುವುದಾಗಿ ತಿಳಿಸಲಾಗಿದೆ. ರಾಜ್ಪುರ ಗ್ರಾಮಕ್ಕೆ ರಸ್ತೆಯಿಲ್ಲದೆ ದಶಕಗಳೇ ಕಳೆದಿದೆ. ಈ ವಿಚಾರದಲ್ಲಿ ಗ್ರಾಮಸ್ಥರು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)
‘ಹೌ ನಾಟ್ ಟು ಮೇಕ್ ಮನಿ’ ರಾಜ್ ಕುಂದ್ರ ಬರೆದಿರುವ ಕಾದಂಬರಿ ಈಗ ವೈರಲ್!
ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಾಲ್ವರು ಮಕ್ಕಳು ಸೇರಿ ಒಂಬತ್ತು ಮಂದಿ ಮೃತ
‘ನನ್ನ ಗಂಡ ಅಶ್ಲೀಲ ವಿಡಿಯೋ ಹಾಕುತ್ತಿರಲಿಲ್ಲ, ಶೃಂಗಾರದ ವಿಡಿಯೋ ಚಿತ್ರೀಕರಿಸ್ತಿದ್ರು’