ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಮಸೂದ್ ಮನೆಗೆ ನೋಟಿಸ್ ಅಂಟಿಸಿದ ಎನ್ಐಎ ಅಧಿಕಾರಿಗಳು
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಆರೋಪಿ ಮಸೂದ್ ಮನೆಗೆ ನೋಟಿಸ್ ಅಂಟಿಸಿದ ಎನ್ಐಎ ಅಧಿಕಾರಿಗಳು
ಉಪ್ಪಿನಂಗಡಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ 34ನೇ ನೆಕ್ಕಿಲಾಡಿ ಅಗ್ನಾಡಿ ಮನೆ ನಿವಾಸಿ ಮಸೂದ್ ಎಂಬಾತನಿಗೆ ಆ.8ರ ಒಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆತನ ಮನೆ ಹಾಗೂ 34ನೇ ನೆಕ್ಕಿಲಾಡಿಯ ಪ್ರಯಾಣಿಕರ ತಂಗುದಾಣಕ್ಕೆ ಎನ್ಐಎ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.
ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಆರೋಪಿಗಳು ಆ.18ರ ಒಳಗೆ ನ್ಯಾಯಾಲಯಕ್ಕೆ ಶರಣಾಗತರಾಗದಿದ್ದಲ್ಲಿ ಮನೆ ಜಪ್ತಿ ಮಾಡಲಾಗುವುದು. ತಲೆಮರೆಸಿಕೊಂಡಿರುವ ಆರೋಪಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಹಿಂದೆ ಜೂನ್ 28ರಂದು ಎನ್ಐಎ ಅಧಿಕಾರಿಗಳು ನೋಟಿಸ್ ಅಂಟಿಸಿದ್ದರು. ಮೊದಲ ಬಾರಿ ಶರಣಾಗಲು 2 ದಿನ ಕಾಲಾವಕಾಶ ನೀಡಿದ್ದರೆ, ಈ ಬಾರಿ ತಿಂಗಳಿಗೂ ಅಧಿಕ ಕಾಲಾವಕಾಶ ನೀಡಲಾಗಿದೆ.
ಪಿಎಫ್ಐ ಸಂಘಟನೆಯ ರಾಜ್ಯಮಟ್ಟದ ನಾಯಕನಾಗಿರುವ ಮಸೂದ್, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸುಳಿವು ಲಭಿಸಿದ ದಿನದಿಂದ ತಲೆಮರೆಸಿಕೊಂಡಿದ್ದು, ಪ್ರಕರಣದ 5ನೇ ಆರೋಪಿಯಾಗಿದ್ದಾನೆ.