ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆರೋಗ್ಯ ಮತ್ತಷ್ಟು ಬಿಗಡಾಯಿದ್ದು, ವೆಂಟಿಲೇಟರ್ ಬೆಂಬಲದಲ್ಲೇ ದೆಹಲಿಯ ಆರ್ಮಿ ರೀಸರ್ಚ್ ಆ್ಯಂಡ್ ರೆಫೆರ್ರಲ್ (ಆರ್ಆ್ಯಂಡ್ಆರ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ತೀವ್ರ ಅನಾರೋಗ್ಯದಿಂದಾಗಿ ಪ್ರಣಬ್ ಮುಖರ್ಜಿ ಅವರು ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಸರ್ಜರಿ ಮಾಡಲಾಗಿದ್ದು, ಬಳಿಕ ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಇದಲ್ಲದೆ ಪ್ರಣಬ್ ಅವರಿಗೆ ಕರೊನಾ ಪಾಸಿಟಿವ್ ಸಹ ಇರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಆರ್ಮಿ ಆರ್ ಆ್ಯಂಡ್ ಆರ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಣಾಬ್ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿದ್ದು, ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣುತ್ತಿಲ್ಲ. ಬದಲಾಗಿ ಮತ್ತಷ್ಟು ಕ್ಷೀಣಿಸುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಬಹುಶಿಸ್ತೀಯ ವೈದ್ಯರ ತಂಡ ಪ್ರಣಬ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಇನ್ನು ಪ್ರಣಬ್ ಅವರು ತಮ್ಮ ಶೌಚಗೃಹದಲ್ಲಿ ಆಕಸ್ಮಿಕವಾಗಿ ಬಿದ್ದಿದ್ದರಿಂದ ಮಿದುಳಿನಲ್ಲಿ ಹೆಪ್ಪುಗಟ್ಟಿದೆ ಎಂದು ಹೇಳಲಾಗುತ್ತಿದೆ.
ನಿನ್ನೆ ಬೆಳಗ್ಗೆಯಷ್ಟೇ ಟ್ವೀಟ್ ಮಾಡಿದ್ದ ಪ್ರಣಬ್ ಮುಖರ್ಜಿ, ನಾನು ಬೇರೆ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಇಂದು ಕೊವಿಡ್-19 ಟೆಸ್ಟ್ಗೆ ಒಳಗಾದಾಗ ಅದರ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಿದ್ದರು.
ಪ್ರಣಬ್ ಮುಖರ್ಜಿ ಬೇಗ ಚೇತರಿಸಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಕೇಂದ್ರ ಸಚಿವ ಪಿಯೂಷ್ ಗೋಯಲ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾರೈಸಿದ್ದು, ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. (ಏಜೆನ್ಸೀಸ್)
ಮಿದುಳು ಸರ್ಜರಿಗೆ ಒಳಗಾಗಿರುವ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ…