ಬೆಂಗಳೂರು:
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್ಡ್ರೈವ್ ಮೂಲಕ ಪ್ರಚಾರ ಮಾಡಲು ನಿರ್ಧರಿಸಿದ್ದು ಯಾರು? ಅದಕ್ಕೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹಾಕಿದವರು ಯಾರು? ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದ್ದು ನಿಖರವಾದ ಉತ್ತರವಿನ್ನೂ ನಿಗೂಢವಾಗಿಯೇ ಉಳಿದಿದೆ.
ವರ್ಷದಿಂದಲೂ ಹಾಸನದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪೆನ್ ಡ್ರೈವ್ ವಿಷಯ ಪ್ರಜ್ವಲ್ ರೇವಣ್ಣ ಸುತ್ತಲೇ ಗಿರಕಿ ಹೊಡೆಯುತ್ತಲೇ ಇತ್ತು. ಎಲ್ಲಿ ಮಾಧ್ಯಮದಲ್ಲಿ ಪ್ರಸಾರವಾಗುತ್ತದೊ ಎನ್ನುವ ಆತಂಕದಿಂದಲೇ ಪ್ರಜ್ವಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಿಟ್ಟುಕೊಂಡಿದ್ದರು.
ಪೆನ್ ಡ್ರೈವ್ ಮೂಲಕ ವಿಷಯವನ್ನು ಪ್ರಚಾರ ಮಾಡುತ್ತಾರೆ ಎನ್ನುವ ಸಣ್ಣ ಸುಳಿವು ಇಲ್ಲದ ಕಾರಣ ರೇವಣ್ಣ ಕುಟುಂಬ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಧೈರ್ಯ ಮಾಡಿತ್ತು. ಅಷ್ಟೆ ಅಲ್ಲ, ಅಭ್ಯರ್ಥಿ ಬದಲಿಸಬೇಕು ಎಂದು ಬಿಜೆಪಿ ಸೂಚನೆ ನೀಡಿದಾಗಲೂ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇದೇ ವಿಷಯಕ್ಕೆ ಹಠಕ್ಕೆ ಬಿದ್ದು ಪ್ರಜ್ವಲ್ಗೆ ಟಿಕೆಟ್ ಬೇಡ ಎಂದಾಗಲೂ ರೇವಣ್ಣ ಕುಟುಂಬ ಹಿಡಿದ ಪಟ್ಟು ಸಡಿಲಿಸಲಿಲ್ಲ. ಹಾಸನಕ್ಕೆ ದೇವೇಗೌಡರನ್ನೆ ಅಭ್ಯರ್ಥಿಯಾಗಿ ಮಾಡೋಣ ಎಂದು ನಿರ್ಧರಿಸಿದ್ದ ಕುಮಾರಸ್ವಾಮಿ ಒಂದು ಹಂತದಲ್ಲಿ ಗೌಡರನ್ನು ಮನವೊಲಿಕೆ ಮಾಡಲು ಯಶಸ್ವಿಯಾಗಿದ್ದರು. ನೀವು ಜನರಿಗೆ ಕೈ ಮುಗಿದು ಅರ್ಜಿ ಹಾಕಿ ಬನ್ನಿ. ಹಾಸನದ ಜನ ನಿಮ್ಮನ್ನು ಕೈ ಬಿಡುವುದಿಲ್ಲ. ಗೆಲ್ಲಿಸಿಕೊಡುತ್ತಾರೆ ಎನ್ನುವ ಕುಮಾರಸ್ವಾಮಿ ಮಾತಿಗೆ ಗೌಡರು ತಲೆದೂಗಿದ್ದರು. ಆದರೆ, ಪ್ರಜ್ವಲ್ಗೆ ಟಿಕೆಟ್ ಬೇಕು ಎಂದು ರೇವಣ್ಣ ಮನೆಯಲ್ಲಿ ಪಟ್ಟು ಹಿಡಿದ ಕಾರಣ ಕುಮಾರಸ್ವಾಮಿ ಪ್ರಯತ್ನಗಳು ಲಿಸಲಿಲ್ಲ.
ಏನೇ ಬಂದರೂ ನಾವು ೇಸ್ ಮಾಡುತ್ತೇವೆ. ಅಂತಾದ್ದೇನು ಆಗುವುದಿಲ್ಲ ಎಂದು ರೇವಣ್ಣ ಗಟ್ಟಿಯಾಗಿ ಕುಮಾರಸ್ವಾಮಿಗೆ ಅಭಯ ನೀಡಿದ್ದರು. ಆದರೆ ಪೆನ್ಡ್ರೈವ್ ಪ್ರಕರಣ ಎಲ್ಲವನ್ನೂ ಉಲ್ಟಾಪಲ್ಟಾ ಮಾಡಿದೆ.
ಪೆನ್ಡ್ರೈವ್ ವಾರ್ ರೂಂ
ಲಭ್ಯವಿರುವ ಮಾಹಿತಿ ಪ್ರಕಾರ 64 ಜಿಬಿ ಪೆನ್ ಡ್ರೈವ್ನಲ್ಲಿ ಎಲ್ಲವನ್ನೂ ಲೋಡ್ ಮಾಡಿ ಹೊರಗೆ ಬಿಡಲಾಗಿದೆ. ಒಂದೇ ದಿನ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿಯೇ ಒಂದು ವಾರ ಈ ಕೆಲಸಕ್ಕಾಗಿಯೇ ಮೀಸಲಿಡಲಾಗಿದ್ದು, ಎಲ್ಲವೂ ಒಬ್ಬ ವ್ಯಕ್ತಿಯ ಮೂಲಕವೇ ಕಾರ್ಯಾಚರಣೆ ಮಾಡಿಸಲಾಗಿದೆ. ಅಷ್ಟನ್ನೂ ಆ ಪೆನ್ಡ್ರೈವ್ಗೆ ಲೋಡ್ ಮಾಡುವುದು ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದು ಸೇರಿದಂತೆ ಎಲ್ಲವನ್ನೂ ನಿಭಾಯಿಸುವುದಕ್ಕೆ ಒಂದು ವಾರ್ ರೂಂನ್ನು ಹದಿನೈದು ದಿನ ಹಿಂದೆಯೇ ಮಾಡಲಾಗಿತ್ತು. ರಾಜಕೀಯ ನಾಯಕರೊಬ್ಬರ ಕಣ್ಗಾವಲಿನಲ್ಲಿಯೇ ಇದು ನಡೆಯುತ್ತಿದ್ದರೂ, ಯಾರಿಗೂ ಈ ಬಗ್ಗೆ ಎಳ್ಳಷ್ಟು ಮಾಹಿತಿಯೂ ಗೊತ್ತಾಗದಂತೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು.
ಹೊರದೇಶದಲ್ಲಿ ಕಾರ್ಯಾಚರಣೆ
ದುಬೈ ಸೇರಿದಂತೆ ನಾಲ್ಕು ದೇಶಗಳಲ್ಲಿನ ಸರ್ವರ್ ಬಳಸಿಕೊಂಡು ಅಪ್ಲೋಡ್ ಮಾಡಲು ವ್ಯವಸ್ಥಿತ ಕಾರ್ಯಾಚರಣೆ ಮಾಡಲಾಗಿತ್ತು. ಆ ಪ್ರಕಾರವೇ ಎಲ್ಲವೂ ನಡೆದಿದೆ. ರಾಜ್ಯದ ಚುನಾವಣೆ ಮೇ 7ಕ್ಕೆ ಮುಗಿಯಲಿದ್ದು, ಅಲ್ಲಿಯ ತನಕ ಈ ಪೆನ್ಡ್ರೈವ್ ಕಾವು ಇಟ್ಟುಕೊಳ್ಳಬೇಕು ಎನ್ನುವ ರಾಜಕೀಯ ತಂತ್ರವನ್ನು ಎಣೆಯಲಾಗಿತ್ತು ಎನ್ನುವ ಮಾಹಿತಿಯೂ ಹೊರಬಿದ್ದಿದೆ. ಈ ಪ್ರಕರಣ ಮೂಲಕ ಪ್ರತಿನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿ ಮಾತನಾಡಬೇಕು ಎನ್ನುವ ತಂತ್ರಗಾರಿಕೆ ಮಾಡಲಾಗಿತ್ತು ಎನ್ನುವ ಮಾಹಿತಿಯೂ ಜೆಡಿಎಸ್ನ ಪ್ರಮುಖ ನಾಯಕರಿಗೆ ಖಚಿತವಾಗಿದೆ.
40 ಸಾವಿರ ಪೆನ್ ಡ್ರೈವ್
ಮಾಧ್ಯಮಗಳಲ್ಲಿ ದೃಶ್ಯಾವಳಿ ತೋರಿಸಬಾರದು ಎನ್ನುವ ನಿರ್ಬಂಧ ಇದ್ದ ಕಾರಣ, ಪೆನ್ ಡ್ರೈವ್ ಮೂಲಕವೂ ಮಾಹಿತಿಯನ್ನು ಹರಡಲು ನಿರ್ಧರಿಸಲಾಗಿತ್ತು. 40 ಸಾವಿರ ಪೆನ್ಡ್ರೈವ್ ಹಾಸನಕ್ಕೆ ಬರಲಿವೆ ಎನ್ನುವ ಸುದ್ದಿಯನ್ನು ಚುನಾವಣೆಗೆ ವಾರದ ಮುಂಚೆ ತೇಲಿ ಬಿಡಲಾಗಿತ್ತು. ಚುನಾವಣೆಗೆ ಐದು ದಿನ ಇದ್ದಾಗ ಒಂದಷ್ಟು ಪೆನ್ಡ್ರೈವ್ಗಳು ಹಾಸನ ತಲುಪಿದ್ದವು. ಒಂದೆರಡು ದಿನದಲ್ಲಿ ಇನ್ನಷ್ಟು ಪೆನ್ಡ್ರೈವ್ ಗಳು ಹಾಸನ ತುಂಬಾ ವಿಲೇವಾರಿ ಮಾಡಲಾಗಿತ್ತು. 64 ಜಿಬಿಯ ಒಂದು ಪೆನ್ ಡ್ರೈವ್ಗೆ ಕನಿಷ್ಠ ಒಂದು ಸಾವಿರ ರೂ ಇದೆ. 40 ಸಾವಿರ ಪೆನ್ ಡ್ರೈವ್ಗೆ 40 ಲಕ್ಷ ಬಂಡವಾಳ ಹಾಕಬೇಕು. ಇದನ್ನು ಹಾಕಿದ್ದು ಯಾರು? ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.