ಚಿತ್ತಾಪುರ: ಚುನಾವಣೆ ಹತ್ತಿರ ಬರುತ್ತಿದ್ದಂತೆಯೆ ರಾಜಕೀಯ ಪಕ್ಷಗಳ ನಡುವೆ ಘರ್ಷಣೆ ನಡೆಯುವುದು ಸಹಜ. ಆರೋಪ, ಪ್ರತ್ಯಾರೋಪಗಳು ಸಾಮಾನ್ಯ. ಈಗಿನ ಕಾಲದಲ್ಲಿ ಪಕ್ಷಗಳು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿಸಿವೆ. ಜನರನ್ನು ತಲುಪಲು ಮತ್ತು ಎದುರಾಳಿಗಳ ಕಾಲೆಳೆಯಲು ಇದು ಅದ್ಭುತ ವೇದಿಕೆಯಾಗಿದೆ. ಸದ್ಯ ಚಿತ್ತಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ವಾರ್ ನಡೆಯುತ್ತಿದ್ದು ಪ್ರಿಯಾಂಕ್ ಖರ್ಗೆಯನ್ನು ಬಿಜೆಪಿ ಹಿಗ್ಗಾ ಮುಗ್ಗಾ ಟ್ರೋಲ್ ಮಾಡುತ್ತಿದೆ.
ಇಂದು ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಬಿಜೆಪಿ ವ್ಯಂಗ ಭರಿತ ಶುಭಾಶಯ ಮಾಡಿದೆ. ಚಿತ್ತಾಪುರದ ಬಿಜೆಪಿ ಮುಖಂಡ ಅರವಿಂದ್ ಚಹ್ವಾಣ್ ಪ್ರಿಯಾಂಕ್ ಖರ್ಗೆಗೆ ವ್ಯಂಗ್ಯ ಭರಿತ ಹುಟ್ಟು ಹಬ್ಬದ ಶುಭಾಶಯ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಹೆಸರು ಮತ್ತು ಪೋಟೊ ಇರುವ ಸ್ಕ್ರೀನ್ ಶಾಟ್ ಬಳಸಿಕೊಂಡು ಶುಭಾಶಯ ಕೋರಲಾಗಿದೆ.
ಬಿಜೆಪಿ ತಯಾರಿಸಿರುವ ಸ್ಕ್ರೀನ್ ಶಾಟ್ನಲ್ಲಿ ಒಬ್ಬರು ಪ್ರಿಯಾಂಕ್ ಖರ್ಗೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಂತರ ಪಾರ್ಟಿ ಕೇಳಿದ್ದಕ್ಕೆ ಪ್ರಿಯಾಂಕ್ ಖರ್ಗೆ ‘ಲೇಯ್ ನನ್ನ ಹತ್ರಾನರ ಪಾರ್ಟಿ ಕೇಳ್ತಿಯಾ ಅಟ್ರಾಸಿಟಿ ಕೇಸ್ ಹಾಕಿಸ್ತೆನೆ’ ಎನ್ನುವ ರೀತಿ ಸ್ಕ್ರೀನ್ ಶಾಟ್ ತಯಾರಿಸಿ ಬಿಜೆಪಿಯವರು ಕಾಲೆಳೆದಿದ್ದಾರೆ.ಇನ್ನು ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಬಗ್ಗೆಯೂ ಪೋಸ್ಟರ್ ಮಾಡಿರುವ ಬಿಜೆಪಿ ಅಲ್ಲಿಯೂ ಪ್ರಿಯಾಂಕ್ ಖರ್ಗೆಗೆ ಶುಭಾಶಯ ಕೋರಿ ಗೇಲಿ ಮಾಡಿದೆ.
‘ಸದಾಶಿವನಗರದಲ್ಲಿ ಅಶುದ್ದ ನೀರು ಕುಡಿದು ವಾಡಿ ಪಟ್ಟಣದ ಜನರಿಗೆ ಶುದ್ದ ನೀರು ಕೊಟ್ಟ ಪ್ರಿಯಾಂಕ್ ಖರ್ಗೆಗೆ ಹುಟ್ಟು ಹಬ್ಬದ ಶುಭಾಶಯ’ ‘ವಾಡಿ ಪಟ್ಟಣದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸಿದ ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬದ ಶುಭಾಶಯ’ ಎಂದು ಅತ್ಯಾಧುನಿಕ ಭಾವನೆ ತರಿಸುವ ಗ್ರಾಫಿಕ್ಸ್ ಚಿತ್ರಗಳ ಕೆಳಗೆ ಬರೆದು ಕಾಲೆಳೆಯಲಾಗಿದೆ.ಇದೇ ರೀತಿ ಹಲವು ರೀತಿಯ ಪೊಸ್ಟರ್ ಮತ್ತು ವಾಟ್ಸ್ ಆಪ್ ಚಾಟ್ ಸ್ಕ್ರೀನ್ ಶಾಟ್ ಮೂಲಕ ವ್ಯಂಗ್ಯ ಭರಿತ ಶುಭಾಶಯವನ್ನು ಬಿಜೆಪಿ ಮುಖಂಡ ಅರವಿಂದ್ ಚಹ್ವಾಣ್ ಕೋರಿದ್ದಾರೆ.