ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ಸಲಹೆಗಾರರಾಗಿ ಸುನಿಲ್ ಕನುಗೋಲು ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಗೆಲುವಿನಲ್ಲಿ ಕನುಗೋಲು ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ಕನುಗೋಲು ಅವರನ್ನು ನೇಮಕ ಮಾಡಿ ಸಿದ್ದರಾಮಯ್ಯ ನಿನ್ನೆ (ಮೇ 31) ಆದೇಶ ಹೊರಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕನುಗೋಲು ಅವರು ರಣತಂತ್ರ ಎಳೆದಿದ್ದರು.
ಇದನ್ನೂ ಓದಿ: ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ; ವಿಜಯವಾಣಿ ಸಂವಾದದಲ್ಲಿ ಕೃಷಿ ಸಚಿವ ಭರವಸೆ
ಯಾರು ಈ ಸನೀಲ್ ಕನುಗೋಲು?
2018ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದ ಸುನೀಲ್ ಕನುಗೋಲು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತಂಡದಲ್ಲಿ ಇದ್ದರೂ ಎನ್ನುವುದು ವಿಶೇಷ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ಗೆ ಹತ್ತಿರವಾಗಿದ್ದ ಸುನೀಲ್, ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.
ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು ಅವರ ತಂಡ ಕಾಂಗ್ರೆಸ್ ಪಕ್ಷದ ಕೆಲವು ನಾಯಕರನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ ಅದರ ವರದಿ ನೀಡಿತ್ತು. ಕಳೆದ ವರ್ಷ ಕಾಂಗ್ರೆಸ್ ನಾಯಕರು ನಡೆಸಿದ್ದ ಚಿಂತನ ಶಿಬಿರದ ಬಳಿಕ ಸುನೀಲ್ ಅವರನ್ನು ಸೋನಿಯಾ ಗಾಂಧಿ ಮುಂಬರುವ ರಾಜ್ಯ ವಿಧಾನಸಬೆ ಚುನಾವಣೆಗಳು ಹಾಗೂ ಲೋಕಸಭೆ ಚುನಾವಣೆಗೆ ತಂತ್ರಗಾರರನ್ನಾಗಿ ನೇಮಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಸುನೀಲ್ ಕನಗೋಲು ಮತ್ತು ಅವರ ತಂಡ ವಿವಿಧ ಪಕ್ಷಗಳ ಪರ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ನಡೆದ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಹಾಗೂ 2021ರಲ್ಲಿ ಡಿಎಂಕೆ ಪರ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಶಾಂತ್ ಕಿಶೋರ್ ಜೊತೆ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಸುನೀಲ್ 2014ರಲ್ಲಿ ಬಿಜೆಪಿಯ ಪರ ಕೆಲಸ ಮಾಡಿದ್ದರು. ಬಿಜೆಪಿಯ ಬಿಲಿಯನ್ ಮೈಂಡ್ಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿ ಪರ ಕೆಲಸ ಮಾಡಿ ಪಕ್ಷ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ಪ್ರೇಯಸಿಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ : ಆರೋಪಿ ಬಂಧನಕ್ಕೆ ಪೊಲೀಸರ ಬಲೆ
ಕರ್ನಾಟಕದ ಬಳ್ಳಾರಿ ಮೂಲದವರಾದ ಸುನೀಲ್ ಬೆಳೆದಿದ್ದು ಚೆನ್ನೈನಲ್ಲಿ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಭಾರತ್ ಜೋಡೋ ಯಾತ್ರೆಯ ರೂಪುರೇಷೆಯನ್ನು ಸಿದ್ದಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರೊಂದಿಗೆ ಸಂಪರ್ಕ ಸಾಧಿಸಲು ಯಾತ್ರೆ ಅನುಕೂಲ ಮಾಡಿದೆ ಮತ್ತು ಪಕ್ಷಕ್ಕೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಹಾಯ ಮಾಡಿದೆ. (ದಿಗ್ವಿಜಯ ನ್ಯೂಸ್)
ಸಂಪಾದಕೀಯ | ರೈತಸ್ನೇಹಿ ಕ್ರಮ; ವಿಶ್ವದಲ್ಲೇ ಅತಿದೊಡ್ಡ ಧಾನ್ಯ ಸಂಗ್ರಹ ಸೌಲಭ್ಯ ಯೋಜನೆ