ಮೈಸೂರು: ತನ್ನ ಪ್ರೇಯಸಿಗೆ ಮೆಸೇಜ್ ಮಾಡುತ್ತಿದ್ದರಿಂದ ಕುಪಿತಗೊಂಡ ಯುವಕ ಸ್ನೇಹಿತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಜನತಾನಗರದಲ್ಲಿ ವಾಸವಿದ್ದ ಶಿವಕುಮಾರ್ (24) ತನ್ನ ರೂಮ್ಮೇಟ್ ಶ್ರೇಯಸ್ನಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವರುಣ ಬಳಿಯ ಗ್ರಾಮವೊಂದರ ಯುವತಿಯನ್ನು ಶ್ರೇಯಸ್ ಪ್ರೀತಿಸುತ್ತಿದ್ದ. ಈ ಮಧ್ಯೆ ಶಿವಕುಮಾರ್ ಆ ಯುವತಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ ಶ್ರೇಯಸ್ ಹಾಗೂ ಶಿವಕುಮಾರ್ ನಡುವೆ ಜಗಳವಾಗಿತ್ತು. ತನ್ನ ಪ್ರೇಯಸಿ ತಂಟೆಗೆ ಬಾರದಂತೆ ಶ್ರೇಯಸ್ ತಾಕೀತು ಮಾಡಿದ್ದ.
ಆದರೂ ಶಿವಕುಮಾರ್ ಯುವತಿಗೆ ಮೆಸೇಜ್ ಮಾಡುತ್ತಿದ್ದರಿಂದ ಕುಪಿತಗೊಂಡ ಶ್ರೇಯಸ್, ಆತನನ್ನು ಮಂಗಳವಾರ ಸಂಜೆ ನಂಜನಗೂಡು ರಸ್ತೆಯ ರಿಂಗ್ರೋಡ್ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಮತ್ತೆ ಜಗಳ ನಡೆದಾಗ ಶ್ರೇಯಸ್ ಚಾಕುವಿನಿಂದ ಶಿವಕುಮಾರ್ಗೆ ಇರಿದು ಪರಾರಿಯಾಗಿದ್ದಾನೆ.
ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ.