ಬೆಂಗಳೂರು: ಇಂದು 10 ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಕೇವಲ 10 ಜನರಿಗೆ ಮಾತ್ರ ಅವಕಾಶ ಕೊಟ್ಟಿದ್ದು ಮತ್ತೊಂದಷ್ಟು ಜನರಲ್ಲಿ ಬೇಸರ ಮೂಡಿಸಿದೆ. ಅದರಲ್ಲಿ ಮಹೇಶ್ ಕುಮಟಳ್ಳಿ, ಸಿ.ಪಿ.ಯೋಗೀಶ್ವರ್ ಕೂಡ ಅಸಮಾಧಾನಗೊಂಡಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ, ಯಡಿಯೂರಪ್ಪನವರ ನಿರ್ಧಾರ ಬೇಸರ ತರಿಸಿದೆ. ಆದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋದಿಲ್ಲ, ಮುಖ್ಯಮಂತ್ರಿ ನಿರ್ಧಾರವನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಹೇಳಿದರು.
ಯಾವ ಕಾರಣಕ್ಕೆ, ಯಾರಿಂದಾಗಿ ಸಚಿವ ಸ್ಥಾನ ಕೈತಪ್ಪಿದೆ ಎಂದು ಗೊತ್ತಾಗುತ್ತಿಲ್ಲ. ನೇರವಾಗಿ ಬೆಳೆದಿರುವ ಮರ ಕಡಿಯುತ್ತಾರೆ. ಅದೇ ಪರಿಸ್ಥಿತಿ ನನ್ನದು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಬೇಕಾ, ಬೇಡವಾ ಎಂದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರಿಂದ ಸಚಿವ ಸ್ಥಾನ ತಪ್ಪಿಲ್ಲ. ಸಾಹುಕಾರ್ ಮನಸಲ್ಲಿ ಏನೂ ಇಟ್ಕೋಂಡಿಲ್ಲ. ನನಗೆ ಯಾರು ಸಚಿವ ಸ್ಥಾನ ತಪ್ಪಿದರು ಎಂದು ಮುಖ್ಯಮಂತ್ರಿಯೇ ಹೇಳಬೇಕು. ನನಗೆ ಅಧಿಕಾರಕ್ಕಿಂತಲೂ ಪಕ್ಷ ಮುಖ್ಯ. ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಲೂ ಸಿದ್ಧ ಎಂದು ಹೇಳಿದ್ದೇನೆ. ಇನ್ನೇನು ಹೇಳಬೇಕು ಎಂದು ಪ್ರಶ್ನಿಸಿದರು.
ಸರ್ಕಾರದ ಮಟ್ಟದಲ್ಲಿ ಸ್ಥಾನಮಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನೋಡಬೇಕು ಯಾವ ಸ್ಥಾನ ಕೊಡುತ್ತಾರೆ ಅಂತ. ನನ್ನದು ಬೇಸರವೇ ಹೊರತು ಅಸಮಾಧಾನ ಅಲ್ಲ. ಸಿಎಂರನ್ನು ಭೇಟಿ ಮಾಡಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾರಣ ಕೇಳುತ್ತೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)