ಸಾಗರ: ಸಾಗರದಲ್ಲಿ ಈಡಿಗ ಸಮಾವೇಶ ಆಯೋಜಿಸಿರುವುದರ ಹಿಂದೆ ಕೆಲವರ ವೈಯಕ್ತಿಕ ಲಾಭವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶಿವಪ್ಪನಾಯಕ ನಗರದ 31ನೇ ವಾರ್ಡ್ನಲ್ಲಿ ನಗರಸಭೆಯಿಂದ ಸುಮಾರು 65 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಗರದಲ್ಲಿ ಮಾ.5ರಂದು ನಡೆಯುತ್ತಿರುವುದು ಈಡಿಗ ಸಮಾವೇಶವಲ್ಲ. ಅದು ಬಿಜೆಪಿ ಸಮಾವೇಶದಂತೆ ಕಾಣುತ್ತಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಗರಿಕ ಸನ್ಮಾನ ಮಾಡಲು ನಮ್ಮ ಆಕ್ಷೇಪವಿಲ್ಲ. ಆದರೆ ಸಮಾಜವನ್ನು ಒಡೆದು ಇನ್ನೊಂದು ಕಡೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ. ಬೆಂಗಳೂರಿನಲ್ಲೂ ಈಡಿಗ ಸಮಾವೇಶ ಮಾಡಲಾಗಿತ್ತು. ಆ ಸಮಾವೇಶದಲ್ಲಿ ಹರತಾಳು ಹಾಲಪ್ಪ ಬಂದು ಭಾಷಣ ಮಾಡಿದ್ದಾರೆ. ಪಕ್ಷಾತೀತವಾಗಿ ನಾವು ಸಮಾವೇಶ ಮಾಡಿದ್ದೇವೆ ಎಂದರು.
ಈಗ ಉದ್ದೇಶಪೂರ್ವಕವಾಗಿ ಸಾಗರದಲ್ಲಿ ಯಡಿಯೂರಪ್ಪ ಅವರನ್ನು ಸನ್ಮಾನಿಸುವ ಹೆಸರಿನಲ್ಲಿ ಈಡಿಗ, ದೀವರು, ಬಿಲ್ಲವ, ನಾಮಧಾರಿ ಸೇರಿ 26 ಪಂಗಡಗಳ ಸಮಾವೇಶ ಮಾಡಲಾಗುತ್ತಿದೆ. ಹಾಗಾದರೆ ಸಮಾವೇಶ ಮಾಡುವವರಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹಾಲಿ ಸಚಿವ ಮಧು ಬಂಗಾರಪ್ಪ ಕಾಣಿಸುತ್ತಿಲ್ಲವೇ? ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು ಎಂದು ಹೇಳಿದರು.
ನಗರ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಹಂಚಿಕೆ ಕುರಿತು ಗಮನ ಹರಿಸಲಾಗಿದೆ. ಹಿಂದೆ ಆಶ್ರಯ ನಿವೇಶನ ನೀಡುತ್ತೇವೆಂದು ನಾಲ್ಕು ಸಾವಿರ ಜನರಿಂದ ಅರ್ಜಿ ಪಡೆದಿದ್ದರು. ಆದರೆ ಒಂದೂ ನಿವೇಶನ ನೀಡಲಿಲ್ಲ. ನಾವು ಅಂತಹ ಕೆಲಸ ಮಾಡುವುದಿಲ್ಲ. ಕನಿಷ್ಠ 2 ಸಾವಿರ ಜನರಿಗೆ ಆಶ್ರಯ ನಿವೇಶನ ನೀಡಲು ಉದ್ದೇಶಿಸಲಾಗಿದೆ. ವಾರ್ಡ್ ನಂ. 29, 30 ಮತ್ತು 31ರ ಸಮಗ್ರ ಅಭಿವೃದ್ಧಿಗಾಗಿ ಸುಮಾರು 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ಪೌರಾಯುಕ್ತ ಎಚ್.ಕೆ.ನಾಗಪ್ಪ, ಅಭಿಯಂತ ರಾಜೇಶ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಶ್ರೀನಿವಾಸ್ ಮೇಸ್ತಿ, ಸಬೀನಾ ತನ್ವೀರ್, ಮಧುಮಾಲತಿ, ಎನ್.ಲಲಿತಮ್ಮ, ಸೈಯದ್ ಜಾಕೀರ್, ಪ್ರಮುಖರಾದ ಉಷಾ, ನಾಗರಾಜ ಗುಡ್ಡೆಮನೆ, ಸದ್ದಾಂ, ಡಿ. ದಿನೇಶ್, ಬಾಬು ಇತರರಿದ್ದರು.