ಹೈದರಾಬಾದ್: ಇಸ್ಲಾಂ ಧರ್ಮದಲ್ಲಿ ಮಹತ್ವದ ತಿಂಗಳು ಎಂದರೆ ಅದು ರಂಜಾನ್ ಎಂದು ಹೇಳಬಹುದಾಗಿದೆ. ಮುಸ್ಲಿಂ ಭಾಂದವರು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪ್ರಾರ್ಥನೆ ಸಲ್ಲಿಸಿ ದಾನ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇದೀಗ ರಂಜಾನ್ ಪ್ರಯುಕ್ತ ಹಂಚಲಾಗುತ್ತಿದ್ದ ಉಚಿತ ಹಲೀಮ್ ಪಡೆಯಲು ನೂರಾರು ಜನ ಜಮಾಯಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ಮಾಲಕ್ಪೇಟೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಪಂತ್ ಆಗಮನದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ಗೆ ಶಾಕ್; ಟೂರ್ನಿಯಿಂದ ಹಿಂದೆ ಸರಿದ ಪ್ರಮುಖ ಆಟಗಾರ
ರಂಜಾನ್ ಪ್ರಯುಕ್ತ ಮಾಲಕ್ಪೇಟೆಯಲ್ಲಿರುವ ಹೋಟೆಲ್ವೊಂದು ಉಚಿತ ಹಲೀಮ್ (ಮಾಂಸ, ಗೋಧಿ ಇತರ ಸಾಮಾಗ್ರಿಗಳಿಂದ ತಯಾರಿಸಿದ ಖಾದ್ಯ) ವಿತರಿಸುವುದಾಗಿ ಘೋಷಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ಹಲವಾರು ಜನರು ಹೋಟೆಲ್ ಬಳಿ ಬಂದಿದ್ದು, ನೂಕು ನುಗ್ಗಲು ಉಂಟಾಗಿತ್ತು. ಜನರ ದಟ್ಟಣೆಯಿಂದ ಹೋಟೆಲ್ ಸಿಬ್ಬಂದಿ ಹೈರಾಣಾಗಿದ್ದು, ಆಹಾರ ವಿತರಿಸುವುದನ್ನು ತಕ್ಷಣ ನಿಲ್ಲಿಸಿದರು. ಗುಂಪನ್ನು ಚದುರಿಸಲು ಕೊನೆಗೆ ಪೊಲೀಸರೇ ಮಧ್ಯ ಪ್ರವೇಶಿಸಬೇಕಾಯಿತು. ಇದರಿಂದ ಕೆಲಕಾಲ ಮಾಲಕ್ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹೋಟೆಲ್ ಹೊರಗೆ ನೆರೆದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಉಚಿತವಾಗಿ ಆಹಾರ ವಿತರಿಸುತ್ತಿರುವುದಾಗಿ ಹೋಟೆಲ್ನವರು ನಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಒಂದು ವೇಳೆ ಅವರು ನಮಗೆ ಮಾಹಿತಿ ನೀಡಿದ್ದರೆ ಜನ ಹಾಗೂ ಸಂಚಾರ ದಟ್ಟನೆ ಉಂಟಾಗದಂತೆ ಅಗತ್ಯ ಕ್ರಮಕೈಗೊಳ್ಳುತ್ತಿದ್ದೆವು. ಮಾಹಿತಿ ನೀಡದೆ ಸಂಚಾರ ದಟ್ಟಣೆಗೆ ಕಾರಣವಾಗಿದ್ದರಿಂದ ಹೋಟೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.