ಬೇಲೂರು: ಪಟ್ಟಣ ಸಮೀಪದ ಯಗಚಿ ಅಣೆಕಟ್ಟಿನಿಂದ ನದಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಆಗ್ರಹಿಸಿದರು. ಡ್ಯಾಂ ಸಮೀಪ ಸೋಮವಾರ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಶಾಸಕರು ಈ ಬಗ್ಗೆ ತುರ್ತು ಗಮನಹರಿಸಿ ಜಲ ಹರಿಯುವಿಕೆ ನಿಲ್ಲಿಸಬೇಕು. ಯಗಚಿ ಅಣೆಕಟ್ಟಿನಿಂದ ಪ್ರತಿನಿತ್ಯ 30 ಕ್ಯೂ. ನೀರನ್ನು ಹೊಳೆಗೆ ಹರಿಬಿಡಲಾಗುತ್ತಿದೆ. ಡ್ಯಾಂನಲ್ಲಿ ಸದ್ಯ ಒಂದು ಟಿಎಂಸಿ ನೀರಿದೆ. ಇದರಲ್ಲಿ ಅರಸೀಕೆರೆ, ಚಿಕ್ಕಮಗಳೂರು ಹಾಗೂ ಬೇಲೂರು ಪಟ್ಟಣಕ್ಕೆ ಕುಡಿಯುವ ನೀರನ್ನು ನೀಡಬೇಕಿದೆ. ಹೀಗಿರುವಾಗ ಹೊಳೆಗೆ ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಸಲಹೆ ನೀಡಿದರು. ಬೇಲೂರಿನಲ್ಲಿ 2 ದಿನಕ್ಕೊಮ್ಮೆ ಕುಡಿಯುವ ನೀರನ್ನು ಬಿಡಲಾಗುತ್ತಿದೆ. ಪಟ್ಟಣದಲ್ಲಿ ಸುಮಾರು 20, 000 ಜನ ಸಂಖ್ಯೆ ಇದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನದಿಗೆ ಹರಿಸುತ್ತಿರುವ ನೀರನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಬೇಲೂರು ಬರಗಾಲ ಪೀಡಿತ ಎಂದು ಘೋಷಣೆಯಾಗಿದೆ. ಬೇಸಿಗೆ ಈಗ ತೀವ್ರಗತಿಯಲ್ಲಿ ಕಾಡುತ್ತಿದೆ. ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ಹೀಗಿರುವಾಗ ಡಾಂನಿಂದ ನೀರನ್ನು ಹೊರಬಿಡಲಾಗುತ್ತಿದೆ. ಶಾಸಕರು ಈಬಗ್ಗೆ ಗಮನಹರಿಸಬೇಕು ಎಂದರು. ಜಯಕರ್ನಾಟಕ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಸನ್ಯಾಸಿಹಳ್ಳಿ ರಾಜಣ್ಣ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ತೀರ್ಥಂಕರ ಮಾತನಾಡಿದರು.
ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ದೀಪು, ಮುಖಂಡರಾದ ಮಾಳೇಗೆರೆ ತಾರಾನಾಥ್, ಪ್ರಸನ್ನ, ಮೋಹನ್,ಮಂಜುನಾಥ್, ಪುಟ್ಟರಾಜು ಇತರರು ಇದ್ದರು. ಆಲೂರಿಗೆ ಜಲ: ಎಇಇ ಪುನೀತ್ ಪ್ರತಿಕ್ರಿಯಿಸಿ, ಸರ್ಕಾರದ ಆದೇಶದಂತೆ ಆಲೂರಿಗೆ ಕುಡಿಯುವ ನೀರನ್ನು ನದಿ ಮೂಲಕ ಹೊರಬಿಡಲಾಗುತ್ತಿದೆ ಎಂದು ತಿಳಿಸಿದರು.