ಬೆಂಗಳೂರು: ಮಾದಕ ದ್ರವ್ಯ ಮಾರಾಟ, ಸಾಗಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೊಲೀಸರು ಭರ್ಜರಿ ಭೇಟಿಯಾಡಿದ್ದಾರೆ. ನೈಜೀರಿಯಾದ ಐವರು ಪ್ರಜೆಗಳನ್ನು ಬಂಧಿಸಿ 8. 52 ಕೋಟಿ ರೂ. ಮೌಲ್ಯದ ಡ್ರಗ್ಸ್ಯನ್ನು ದಕ್ಷಿಣ ವಿಭಾಗ ಪೊಲೀಸರು ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಪ್ರಜೆಗಳಾದ ಲಾರೆನ್ಸ್ ಅಲಿಯಾಸ್ ಪೀಟರ್, ಬ್ರೈಟ್, ಹ್ಯಾಸ್ಲಿ, ್ರಾಂಕ್ ಅಲಿಯಾಸ್ ಸಂಡೆ ಮತ್ತು ಇಮ್ಯಾನುಯಲ್ ನಾಜಿ ಬಂಧಿತರು. ಆರೋಪಿಗಳಿಂದ 8.52 ಕೋಟಿ ರೂ. ಮೌಲ್ಯದ 3.152 ಕೆಜಿ ಎಂಡಿಎಂಎ, 356 ಕೊಕೇನ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಹಳೇ ಚಾಳಿ ಮುಂದುವರೆಸಿದ್ದರು
ಕಿಂಗ್ಪಿನ್ಗಳಾದ ಪೆಡ್ಲರ್ ಲಾರೆನ್ಸ್ ಮತ್ತು ಬ್ರೈಟ್ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದರು. 2022ರಲ್ಲಿ ತಲಘಟ್ಟಪುರ ಪೊಲೀಸರು, ಎನ್ಡಿಪಿಎಸ್ ಕಾಯ್ದೆಯಲ್ಲಿ ಬಂಧಿಸಿ ಸೆಪ್ಟೆಂಬರ್ನಲ್ಲಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಿದರಹಳ್ಳಿ ಬಳಿಯ ಮ್ಯಾಂಗೋ ಲೇಔಟ್ನಲ್ಲಿ ನೆಲೆಸಿದ್ದರು.
ಇದನ್ನೂ ಓದಿ: 12ರಿಂದ ಹೆಸರುಘಟ್ಟದಲ್ಲಿ ಅಪ್ಪೆ ಮಿಡಿ ಮಾವು ಮೇಳ
ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣ ಮುಂಭಾಗದ ಪಾರ್ಕ್ನಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ವಿ.ವಿ.ಪುರ ಇನ್ಸ್ಪೆಕ್ಟರ್ ಮಿರ್ಜಾ ಆಲಿ ರಜಾ ನೇತೃತ್ವದ ತಂಡ ಪೆಡ್ಲರ್ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆಯಾಗಿದೆ. 103 ಗ್ರಾಂ ಬಳಿ ಎಂಡಿಎಂಎ, 104 ಗ್ರಾಂ ಬ್ರೌನ್ ಎಂಡಿಎಂಎ, 13 ಗ್ರಾಂ ಕೊಕೇನ್ ಸ್ಥಳದಲ್ಲಿ ಪತ್ತೆಯಾಗಿದೆ. ಆನಂತರ ಆರೋಪಿಗಳು ಕೊಟ್ಟ ಸುಳಿವಿನ ಮೇರೆಗೆ ಬಿದರಹಳ್ಳಿ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಪೆಡ್ಲರ್ಗಳು ವಶಕ್ಕೆ
ಅದೇ ರೀತಿ ಪೆಡ್ಲರ್ಗಳಾದ ಹ್ಯಾಸ್ಲಿ, ಫ್ರ್ಯಾಂಕ್ ಮತ್ತು ಇಮ್ಯಾನುಯಲ್ ನಾಜಿ ಎಂಬುವರನ್ನು ಜಯನಗರ ಇನ್ಸ್ಪೆಕ್ಟರ್ ಯು.ಆರ್. ಮಂಜುನಾಥ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ 1.20 ಕೋಟಿ ರೂ. ಮೌಲ್ಯದ 1.152 ಕೆಜಿ ಎಂಡಿಎಂಎ, 40 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ ಎಂದು ಸಿ.ಎಚ್. ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬಾಣಸವಾಡಿ ಸಮೀಪದ ಕಮ್ಮನಹಳ್ಳಿಯಲ್ಲಿ ನೆಲೆಸಿದ್ದ ಹ್ಯಾಸ್ಲಿ, ಫ್ರಾಂಕ್ ಅಲಿಯಾಸ್ ಸಂಡೆ ಹಾಗೂ ಇಮ್ಯಾನುಯಲ್ ನಾಜಿ, 4 ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ನಗರಕ್ಕೆ ಬಂದಿದ್ದರು. ಬಳಿಕ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿಗಳು, ಐಷರಾಮಿ ಜೀವನ ನಡೆಸಲು ಡ್ರಗ್ಸ್ ಮಾರಾಟ ಶುರು ಮಾಡಿದ್ದರು. 3 ವರ್ಷಗಳ ಹಿಂದೆ ಆರೋಪಿಗಳನ್ನು ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಕೆ.ಆರ್. ಪುರ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಆನಂತರ ಜಾಮೀನನ ಮೇರೆಗೆ ಜೈಲಿನಿಂದ ಹೊರ ಬಂದ ನೈಜೀರಿಯಾ ಗ್ಯಾಂಗ್, ಮತ್ತೆ ನಗರದಲ್ಲಿ ಡ್ರಗ್ಸ್ ಮಾರಾಟ ಮುಂದುವರಿಸಿದ್ದರು. ಇತ್ತೀಚಿನ ಈ ತಂಡದ ಚಟುವಟಿಕೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಡ್ರಗ್ಸ್ ಖರೀದಿಸುವ ನೆಪದಲ್ಲಿ ಜಯನಗರಕ್ಕೆ ಕರೆಸಿ ಖೆಡ್ಡಾಕೆ ಬೀಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.