ಬೆಂಗಳೂರು: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಏ.12 ಮತ್ತು ಏ.13ರಂದು ಹೆಸರುಘಟ್ಟದಲ್ಲಿ ‘ಅಪ್ಪೆ ಮಿಡಿ ಮಾವು ಮೇಳ’ ನಡೆಯಲಿದೆ.
ಬೆಳಗಾರರ ಹಾಗೂ ಉದ್ಯಮಿಗಳ ನಡುವಿನ ಸಂಪರ್ಕ ಸೇತುವೆ ಕಲ್ಪಿಸಲು ಹಮ್ಮಿಕೊಂಡಿರುವ ಮೇಳದಲ್ಲಿ 100ಕ್ಕೂ ಹೆಚ್ಚು ಅಪ್ಪೆ ಮಿಡಿ ಮಾವುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ.
ರಾಜ್ಯದ ವಿವಿಧೆಡೆಯಿಂದ ಭಾಗಿ
ಶಿರಸಿ, ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಹೊಸನಗರ, ಕುಮುಟಾ, ಹೊನ್ನಾವರ, ಸಕಲೇಶಪುರ, ಕೊಡಗು ಮತ್ತ ಚಿಕ್ಕಮಗಳೂರು ಸೇರಿ ಇತರ ಪ್ರದೇಶಗಳಲ್ಲಿ ಅಪ್ಪೆಮಿಡಿ ಮಾವಿನ ಉಪ್ಪಿನ ತಯಾರಕರು ಮೇಳದಲ್ಲಿ ಭಾಗಿಯಾಗಲಿದ್ದಾರೆ. ಅಪ್ಪೆಮಿಡಿಯಿಂದ ತಯಾರಿಸುವ ಖಾದ್ಯಗಳ ಪ್ರದರ್ಶನವೂ ಇರಲಿದೆ.
ಅಪ್ಪೆಮಿಡಿ ಮಾವಿನಲ್ಲಿ 250ಕ್ಕೂ ಹೆಚ್ಚು ತಳಿಗಳಿವೆ. ಕರ್ನಾಟಕ, ಗೋವಾ, ತಮಿಳುನಾಡು ಮತ್ತು ಕೇರಳದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾವಿನ ತಳಿ ಅಪಾಯದಲ್ಲಿದೆ. ಹಾಗಾಗಿ, ಅವುಗಳನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮೊದಲ ಬಾರಿ ಮೇಳ ಆಯೋಜಿಸಲಾಗಿದೆ.
ಇದನ್ನೂ ಓದಿ: ಸಿಬ್ಬಂದಿ ಮೇಲೆ ಹಲ್ಲೆ; ಲಂಡನ್ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್
ಹೊಸ ತಳಿ ಸಂಶೋಧನೆ
ಹೊಸದಾಗಿ ಅಭಿವೃದ್ಧಿಪಡಿಸಿರುವ 5 ಅಪ್ಪೆಮಿಡಿ ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹೊಸ ತಳಿಗಳು ಭೂಮಿಗೆ ನಾಟಿ ಮಾಡಿದ 4-5 ವರ್ಷಗಳಲ್ಲಿ ಸಲು ಬಿಡಲಿದೆ. ಆರಂಭದಲ್ಲಿ ಐದು ಕೆಜಿ ವರೆಗೆ ಅಪ್ಪೆಮಿಡಿ ಮಾವು ದೊರೆಯುತ್ತದೆ. ನಂತರ ಸಲಿನ ಪ್ರಮಾಣ ಹೆಚ್ಚಾಗಲಿದೆ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಣ್ಣುಗಳ ವಿಭಾಗದ ವಿಜ್ಞಾನಿ ಶಂಕರ್ ತಳಿಸಿದ್ದಾರೆ.