ಹುಬ್ಬಳ್ಳಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿ ಅಮಾನತಿಗೆ ಒಳಗಾದ ಪೊಲೀಸ್ ಇನ್ಸ್ಪೆಕ್ಟರ್, ಆ ಕುರಿತ ಆದೇಶ ಹೊರಬೀಳುತ್ತಿದ್ದಂತೆ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರುವಂತಾದ ಪ್ರಕರಣವೊಂದು ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಕಸಬಾಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಅಡಿವೆಪ್ಪ ಬನ್ನಿ ಅವರನ್ನು ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಹೊರಬೀಳುತ್ತಿದ್ದಂತೆ ಇನ್ಸ್ಪೆಕ್ಟರ್ ಅಸ್ವಸ್ಥಗೊಂಡಿದ್ದಾರೆ.
ಕಳೆದ 12ರಂದು ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯ ಜಂಗ್ಲಿಪೇಟೆ ನಿವಾಸಿ ಸಂತೋಷ್ ಮುರಗೋಡ್ ಎಂಬಾತನ ಕೊಲೆಯಾಗಿತ್ತು. ರೌಡಿಶೀಟರ್ ಶಿವಾನಂದ ಎಂಬಾತ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ. ಅದರಲ್ಲೂ ರೌಡಿಶೀಟರ್ ಶಿವಾನಂದ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಆತನ ವಿರುದ್ಧ ದೂರು ನೀಡಿದ್ದರೂ ಪೊಲೀಸರು ತೆಗೆದುಕೊಂಡಿರಲಿಲ್ಲ. ಹೀಗಾಗಿ ಸಂತೋಷ್ ಸಂಬಂಧಿಕರು ಕಸಬಾಪೇಟೆ ಪೊಲೀಸ್ ಠಾಣೆ ಮುಂಭಾಗ ಶವ ಇರಿಸಿ ಪ್ರತಿಭಟನೆ ಮಾಡಿದ್ದರು.
ಸಂತೋಷ್ ಸಾವಿಗೆ ಕಸಬಾಪೇಟೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವೂ ಕೇಳಿ ಬಂದಿತ್ತು. ಜತೆಗೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅಡಿವೆಪ್ಪ ಬನ್ನಿ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ ಅಮಾನತು ಆದೇಶ ಪ್ರಕಟವಾಗುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಇನ್ಸ್ಪೆಕ್ಟರ್ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸ್ ಮನೆಗೇ ಹೊಕ್ಕ ಕಳ್ಳರು; ಪರಾರಿ ಆಗುವಾಗ ಅಡ್ಡಬಂದ ಎಎಸ್ಐ ಪುತ್ರನಿಗೆ ಗುಂಡೇಟು..
ರೋಗ ತಡೆಗೆ ನೀಡಿದ್ದ ಮಾತ್ರೆ ತಿಂದ ಮಕ್ಕಳು ಅಸ್ವಸ್ಥ!; 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು..