ಬಾಗಲಕೋಟೆ: ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ತೇರನ್ನು ಕರೊನಾ ನಿರ್ಬಂಧವನ್ನೂ ಲೆಕ್ಕಿಸದೆ ಎಳೆದು ರಥೋತ್ಸವ ಆಚರಿಸಿದ್ದಕ್ಕೆ ಇದೀಗ ಪೊಲೀಸರು ಕೇಸು ಜಡಿದಿದ್ದಾರೆ. ದೇವಸ್ಥಾನದ ಟ್ರಸ್ಟಿಗಳು ಹಾಗೂ ಮಾಡಲಗೇರಿ ಗ್ರಾಮದ ಹತ್ತು ಹಿರಿಯರ ವಿರುದ್ಧ ಒಟ್ಟು ಎರಡು ಎಫ್ಐಆರ್ ದಾಖಲಾಗಿದೆ.
ಕರೊನಾ ನಿರ್ಬಂಧ ಇರುವುದರಿಂದ ರಥೋತ್ಸವ ನಡೆಸಬಾರದು ಎಂದು ಬಾಗಲಕೋಟೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಮಾತ್ರವಲ್ಲ, ನಿಯಮ ಮೀರಿ ತೇರು ಎಳೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಹಾಕಲಾಗಿತ್ತು.
ಆದರೆ ಬನಶಂಕರಿ ರಥೋತ್ಸವ ಇತಿಹಾಸದಲ್ಲಿ ಯಾವತ್ತೂ ರದ್ದಾದ ಉದಾಹರಣೆ ಇಲ್ಲ. ತೇರನ್ನು ಎಳೆದೇ ಎಳೆಯುತ್ತೇವೆ ಎಂದು ಭಕ್ತರು ಪಟ್ಟು ಹಿಡಿದು ಪೊಲೀಸ್ ಬಂದೋಬಸ್ತನ್ನೂ ಮೀರಿ ಇಂದು ಸಂಜೆ ಐದರ ಸುಮಾರಿಗೆ ತೇರನ್ನು ಎಳೆದಿದ್ದರು.
ಹೀಗಾಗಿ ಬನಶಂಕರಿ ದೇವಸ್ಥಾನದ ಟ್ರಸ್ಟಿಗಳು ಮತ್ತು ಮಾಡಲಗೇರಿ ಗ್ರಾಮದ ಹತ್ತು ಮಂದಿ ಹಿರಿಯರ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಜಿಲ್ಲಾಡಳಿತದ ನಿಷೇಧದ ನಡುವೆಯೂ ಈ ಭಕ್ತರು ರಥ ಎಳೆಯುವ ಹಗ್ಗವನ್ನು ಮಾಡಲಗೇರಿಯಿಂದ ತಂದಿದ್ದರು. ಅಲ್ಲದೆ ಕೋವಿಡ್ ನಿಯಮ ಉಲ್ಲಂಘಿಸಿ ತೇರನ್ನು ಎಳೆದಿದ್ದರು. ಈ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಹೀಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹಿಸ್ಟರಿ ರಿಪೀಟ್ಸ್.. ಇದು ಚರಿತ್ರೆ ಸೃಷ್ಟಿಸೋ ಅವತಾರ: ಭಕ್ತರ ಆವೇಶಕ್ಕೆ ಪೊಲೀಸರ ಸರ್ಪಗಾವಲೂ ತತ್ತರ..