ಹಾವೇರಿ: ಮನೆ, ಅಂಗಡಿ ಕಳ್ಳತನ, ಸೇರಿದಂತೆ ಇತರ ಅಪರಾಧ ಕೃತ್ಯಗಳನ್ನು ಭೇದಿಸುತ್ತಿದ್ದ ಕೇವಲ ಮೂರು ವರ್ಷದ ಪೊಲೀಸ್ ಶ್ವಾನ ಅನಾರೋಗ್ಯದಿಂದ ಬಳಲಿ ‘ಝಾನ್ಸಿ’ ಬಾರದ ಲೋಕಕ್ಕೆ ತೆರಳಿದೆ. ಪೊಲೀಸ್ ಸ್ನೇಹಿಯಾಗಿದ್ದ ಈ ಶ್ವಾನದ ಅಗಲಿಕೆ ಖಾಕಿಪಡೆ ಕಂಬನಿ ಮಿಡಿಯುವಂತೆ ಮಾಡಿದೆ.
ಡಾಬರ್ಮನ್ ಫಿಂಚರ್ ತಳಿಯ ಹೆಣ್ಣು ಶ್ವಾನ ನವೆಂಬರ್ 29, 2020ರಂದು ಜನಿಸಿತ್ತು. ಬೆಂಗಳೂರು ಆಡುಗೋಡಿಯ ಸಿಎಆರ್ ದಕ್ಷಿಣ ವಿಭಾಗದಲ್ಲಿ 2021ರ ಜನವರಿಯಿಂದ ಜುಲೈವರೆಗೆ ತರಬೇತಿ ಪಡೆದಿತ್ತು. ಬಳಿಕ ಸುಮಾರು ಎರಡೂವರೆ ವರ್ಷ ಹಾವೇರಿ ಜಿಲ್ಲಾ ಶ್ವಾನದಳದಲ್ಲಿ ಸೇವೆ ಸಲ್ಲಿಸಿತ್ತು. ಝಾನ್ಸಿ ತನ್ನ ಸೇವಾ ಅವಧಿಯಲ್ಲಿ ಒಟ್ಟು 130 ಪ್ರಕರಣಗಳಲ್ಲಿ ಕಾರ್ಯ ನಿರ್ವಹಿಸಿದೆ. ಅದರಲ್ಲಿ ಮನೆಗಳ್ಳನ, ಮತ್ತಿತರ 20 ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತು. ಶ್ವಾನದಳದ ಎಫ್.ಎಂ.ಕಾಮನಹಳ್ಳಿ ಹಾಗೂ ಡಿ.ಸಿ.ಪಾಟೀಲ ಶ್ವಾನದ ನಿರ್ವಾಹಕರಾಗಿದ್ದು, ಅತ್ಯಂತ ಪ್ರೀತಿಯಿಂದ ಅಲಹುತ್ತಿದ್ದರು. ಝಾನ್ಸಿ ಕೂಡ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುತ್ತಿತ್ತು. ಬೇಬಿಸಿಯಾ ಬಿಬ್ಸೋನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಈ ಶ್ವಾನ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ನಿಧನ ಹೊಂದಿತು.
ಎಸ್ಪಿ ಅಂತಿಮ ನಮನ : ಝಾನ್ಸಿ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಸೇರಿದಂತೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸೋಮವಾರ ಅಂತಿಮ ನಮನ ಸಲ್ಲಿಸಿದರು. ಬಳಿಕ ಪರೇಡ್ ಮೈದಾನದ ಬಳಿ ಪೊಲೀಸ್ ವಿಧಿವಿಧಾನದ ಮೂಲಕ, ಕುಶಾಲ ತೋಪು ಆರಿಸಿ ಸರ್ಕಾರಿ ಗೌರವಗಳೊಂದಿಗೆ ಝಾನ್ಸಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆರ್ಪಿಐ ಶಂಕರಗೌಡ ಪಾಟೀಲ, ಸಹ ಶ್ವಾನ ನಿರ್ವಾಹಕರು ಮಾಲತೇಶ ಹರಿಜನ, ಮಂಜು ದೊಡ್ಡಮನಿ, ಎಸ್.ಜಿ.ಮಾಳಗುಡ್ಡಪ್ಪನವರ, ಎಸ.ಎಸ್.ಪಾಟೀಲ, ಎಸ್.ಎಲ್.ಕಬ್ಬೂರ, ಇತರರಿದ್ದರು.
ಮಹತ್ವದ ಸುಳಿವು ನೀಡಿತ್ತು
ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಸನೂರ ಗ್ರಾಮದ ವಜೀರಸಾಬ ಮಳಗಿ ಎಂಬುವರ ಮನೆಯಲ್ಲಿ ಜೂನ್ 28, 2023ರಂದು ಕಳ್ಳತನ ನಡೆದಿತ್ತು. 3.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇತರೆ ವಸ್ತುಗಳನ್ನು ಕದ್ದಿದ್ದರು. ಈ ಪ್ರಕರಣದಲ್ಲಿ ಝಾನ್ಸಿ ನೀಡಿದ್ದ ಮಹತ್ವದ ಸುಳಿವು ಆಧರಿಸಿ ಪೊಲೀಸರು ಆರೋಪಿತರನ್ನು ಬಂಧಿಸಿದ್ದರು. ಇದೇ ಆರೋಪಿತರು ಸರಣಿ ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದು ನಂತರ ಗೊತ್ತಾಗಿತ್ತು ಎನ್ನುತ್ತಾರೆ ಶ್ವಾನದಳದ ಉಸ್ತುವಾರಿ ನಾಗರಾಜ ಗುಬ್ಬೇರ.
ಕ್ರೈಂ ಡಾಗ್ ಎಂದೇ ಝಾನ್ಸಿ ಖ್ಯಾತಿ ಪಡೆದಿತ್ತು. ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿತ್ತು. ಇನ್ನು ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯದಿಂದ ಮೃತಪಟ್ಟಿದ್ದು, ಬೇಸರ ಮೂಡಿಸಿದೆ.
| ಎನ್.ಎಂ.ಹನಕನಹಳ್ಳಿ, ಡಿವೈಎಸ್ಪಿ (ಡಿಆರ್ ವಿಭಾಗ)
ಮಾಲ್ಡೀವ್ಸ್ನಲ್ಲಿ 1 ಪಿಜ್ಜಾ ಖರಿದೀಸುವ ದುಡ್ಡಲ್ಲಿ ಭಾರತದಲ್ಲಿ ಚಿನ್ನವನ್ನೇ ಕೊಳ್ಳಬಹುದು!