ಚನ್ನರಾಯಪಟ್ಟಣ: ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸರು ಹಗಲು ರಾತ್ರಿ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಆದರೆ, ಇಲ್ಲೊಂದು ಖತರ್ನಾಕ್ ಕಳ್ಳರ ತಂಡ ಪೊಲೀಸ್ ವೇಷದಲ್ಲೇ ಸುಲಿಗೆಗೆ ಇಳಿದಿದೆ.
ಕಸಬಾ ಹೋಬಳಿ ಹೊಸೂರು ಗ್ರಾಮದ ನಿವಾಸಿ ನಂಜೇಗೌಡರ ಮಗ ಲವಣ್ಣಗೌಡ ಎಂಬುವರ ಮನೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿದ ನಾಲ್ವರು ಚಿನ್ನಾಭರಣ ದೋಚಿದ್ದಾರೆ. ಖದೀಮರು ಈ ಮನೆಗೆ ಎಂಟ್ರಿ ಕೊಟ್ಟ ವೇಳೆ ಹೇಳಿದ ಕಥೆ ಮನೆಯವರನ್ನೆಲ್ಲ ಬೆಚ್ಚಿಬೀಳಿಸಿದೆ. ಅದ್ಹೇನು ಗೊತ್ತಾ?
ಇದನ್ನೂ ಓದಿರಿ video/ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಮುಖ್ಯಪೇದೆಯ ಕಾರಿನ ಚಕ್ರದ ಗಾಳಿ ತೆಗೆದ ತಹಸೀಲ್ದಾರ್!
ಆ.17ರ ರಾತ್ರಿ 9.15ರ ಸುಮಾರಿನಲ್ಲಿ ಲವಣ್ಣಗೌಡರ ಮನೆ ಮುಂದೆ ಇನ್ನೋವಾ ಕಾರೊಂದು ಬಂದು ನಿಂತಿದ್ದು, ಅದರಿಂದ ಕೆಳಗಿಳಿದ ನಾಲ್ವರು ಸೀದಾ ಮನೆಯ ಒಳಬಂದು ಬಾಗಿಲು ಹಾಕಿಕೊಂಡಿದ್ದಾರೆ. ‘ನಾವು ಪೊಲೀಸರು, ಬೆಂಗಳೂರಿನಿಂದ ಬಂದಿದ್ದೇವೆ. ನಿಮ್ಮ ಸಹೋದರ ಬೆಂಗಳೂರಿನಿಂದ ಕಳ್ಳತನ ಮಾಡಿ ಹಣ ದೋಚಿಕೊಂಡು ಬಂದಿದ್ದಾನೆ. ಹಣ ಕಳೆದುಕೊಂಡವರು ದೂರು ನೀಡಿದ್ದಾರೆ. ಆ ಹಣವನ್ನು ಎಲ್ಲಿ ಇಟ್ಟಿದ್ದಾನೆ ಕೊಡಿ’ ಎಂದು ಗದರಿಸಿದ್ದಾರೆ. ಜತೆಗೆ ಫೈಲ್ ತೆಗೆದು ಲವಣ್ಣಗೌಡನ ತಮ್ಮ ಕೃಷ್ಣೇಗೌಡನ ಫೋಟೋ ತೋರಿಸಿದ್ದಾರೆ.
ನನ್ನ ತಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿಲ್ಲ. ಅವನು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಲವಣ್ಣಗೌಡ ಹೇಳಿದರೂ ಸಿಟ್ಟಿಗೆದ್ದ ನಕಲಿ ಪೊಲೀಸರು, ಎಲ್ಲರನ್ನೂ ಮನೆಯ ಹಾಲ್ನಲ್ಲಿ ಕೂರಿಸಿ ಸುಮ್ಮನೆ ಇರುವಂತೆ ಗದರಿಸಿದ್ದಾರೆ. ಬಳಿಕ ಹಾಲ್ನಲ್ಲಿದ್ದ ಬೀರು, ಸೋಫಾ ಕೆಳಗೆ, ದಿವಾನ್ ಕಾಟ್ ಹಾಗೂ ಟಿಪಾಯಿ ಕೆಳಗಡೆ ಹುಡುಕಿ ಏನೂ ಸಿಗದ ಕಾರಣ ದೇವರ ಮನೆಯನ್ನು ಚೆಕ್ ಮಾಡಿದ್ದು, ಪಕ್ಕದಲ್ಲಿದ್ದ ಬೀರುವಿನ ಬಾಗಿಲನ್ನು ತೆಗೆದು ಸೇಫ್ ಲಾಕರ್ನಲ್ಲಿದ್ದ 12 ಗ್ರಾಂ ತೂಕದ 1 ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಓಲೆ, 5 ಗ್ರಾಂನ ಉಂಗುರ ಸೇರಿದಂತೆ 75 ಸಾವಿರ ರೂ. ಮೌಲ್ಯದ ಚಿನ್ನಾಭರಣ ತೆಗೆದುಕೊಂಡಿದ್ದಾರೆ.
ನೀವೆಲ್ಲರೂ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಬನ್ನಿ ಎಂದ ನಕಲಿ ಪೊಲೀಸರು ಅಲ್ಲಿಂದ ಹೊರಟು ಹೋಗಿದ್ದಾರೆ. ಮನೆಯ ಸದಸ್ಯರು ಅವರನ್ನು ಅಸಲಿ ಪೊಲೀಸರೆಂದೇ ನಂಬಿಕೊಂಡಿದ್ದಾರೆ. ಈ ವಿಷಯ ತಿಳಿದ ಕೃಷ್ಣೇಗೌಡ, ಚಾಮನಗರದಿಂದ ಸ್ವಗ್ರಾಮಕ್ಕೆ ಬಂದಿದ್ದು, ಆ.18ರ ಸಂಜೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ಡಿಜೆ ಹಳ್ಳಿ ಗಲಭೆಕೋರರ ಹೆಡೆಮುರಿ ಕಟ್ಟಲು ಸಿಎಂ ಸಜ್ಜು; ಗೂಂಡಾ ಕಾಯ್ದೆ, ನಷ್ಟ ವಸೂಲಿ ಬ್ರಹ್ಮಾಸ್ತ್ರ ಬಳಕೆ