ಬೆಂಗಳೂರು: ‘ನನ್ನ ಮೊಬೈಲ್ ಹಾಳಾಗಿದೆ. ಒಂದೇ ಒಂದು ಕರೆ ಮಾಡ್ಬೇಕು’ ಎಂದು ಹೇಳಿ ಈ ಭೂಪ ಮತ್ತಿಕೆರೆಯ ದೇವವ್ರತ್ ಸಿಂಗ್ ಎಂಬಾತನ ಮೊಬೈಲ್ ಪಡೆದಿದ್ದ. ಇದನ್ನು ನಿಜ ಎಂದು ನಂಬಿದ್ದೇ ಯುವಕ ದೇವವ್ರತ್ ಸಿಂಗ್ನ ಒಂದೇ ಒಂದು ತಪ್ಪು.
ದೇವವ್ರತ್, ತನ್ನ ಮೊಬೈಲ್ ಕೊಡೊ ಮುನ್ನ ಅನ್ಲಾಕ್ ಮಾಡಿ ಕೊಟ್ಟಿದ್ದ. ಪ್ಯಾಟರ್ನ್ ಗಮನಿಸಿದ್ದ ಆರೋಪಿ ಪವನ್, ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ. ನಂತರ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋ ವೀಡಿಯೋಗಳನ್ನು ನೋಡಿದ್ದಾನೆ.
ದೇವವ್ರತ ಸಿಂಗ್ ಹಾಗು ಆತನ ಪ್ರೇಯಸಿಯ ಖಾಸಗಿ ಫೋಟೋಗಳನ್ನ ನೋಡಿದ ಪವನ್, ಇದನ್ನೇ ಹಣ ಮಾಡಲು ಒಳ್ಳೆ ಉಪಾಯ ಎಂದುಕೊಂಡು ದೇವವ್ರತ್ನ ಗರ್ಲ್ ಫ್ರೆಂಡ್ಗೆ ಕರೆ ಮಾಡಿ ಖಾಸಗಿ ಫೋಟೋಗಳನ್ನ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಫೋಟೊ ಲೀಕ್ ಮಾಡಬಾರದು ಅಂದ್ರೆ1 ಲಕ್ಷ ಹಣ ಕೊಡಬೇಕು ಅಂತ ಬ್ಲಾಕ್ಮೇಲ್ ಕೂಡ ಮಾಡಿದ್ದಾನೆ.
ಇಷ್ಟೇ ಸಾಲದು ಅಂತ ಯುವತಿಗೆ ಕೆಟ್ಟ ಕೆಟ್ಟ ಮೆಸೇಜ್ ಕೂಡ ಕಳುಹಿಸಿದ್ದಾನೆ. ಹಣ ಆಸೇ ಎಷ್ಟು ಹೆಚ್ಚಾಗಿತ್ತು ಎಂದರೆ, ಈತ ದೇವವ್ರತ್ನ ತಾಯಿಗೂ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ. ಈ ಪವನ್ನ ಕಿರುಕುಳ ತಾಳಲಾರದೇ ದೇವವ್ರತ್ ಸಿಂಗ್, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ದೂರು ದಾಖಲಿಸಕೊಂಡ ಯಶವಂತಪುರ ಪೊಲೀಸರು ಹಣ ಕೊಡೊದಾಗಿ ಕರೆಸಿ ಆರೋಪಿ ಪವನ್ನನ್ನು ಬಂಧಿಸಿದ್ದಾರೆ. ಇನ್ನು ವಿಚಾರಣೆ ವೇಳೆ ಆರೋಪಿ ಪವನ್ಗೆ ಡ್ರಗ್ ಪೆಡ್ಲರ್ ಜೊತೆ ನಂಟಿರುವುದು ಬೆಳಕಿಗೆ ಬಂದಿದೆ. ಈ ಖತರ್ನಾಕ್ ಪವನ್ ಸಣ್ಣ ಪುಟ್ಟ ಕಳ್ಳತನದ ಜೊತೆಗೆ ಡ್ರಗ್ ಪೆಡ್ಲರ್ ಸೈಯದ್ ನಿಯಾಜ್ ಜೊತೆ ಡ್ರಗ್ಸ್ ಮಾರಾಟ ಕುಡ ಮಾಡುತ್ತಿದ್ದ.
ಪವನ್ ನೀಡಿದ ಮಾಹಿತಿ ಮೇರೆಗೆ ಸೈಯದ್ ನಿಯಾಜ್ನನ್ನೂ ಬಂಧಿಸಲಾಗಿದೆ. ಬಂಧಿತನಿಂದ 3.45 ಲಕ್ಷ ಬೆಲೆಬಾಳುವ ಎಂಡಿಎಂಎ, 560 ಗ್ರಾಂ ಗಾಂಜಾ, ಮೊಬೈಲ್ ಫೋನ್,ಒಂದು ಕಾರ್,ಎಕ್ಸಟೆಸಿ ಟ್ಯಾಬ್ಲೆಟ್ ಪೌಡರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಯಶವಂತಪುರ ಠಾಣೆಯ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.