ಮೈಸೂರು: ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಆರ್.ಎನ್. ಕುಲಕರ್ಣಿ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ಅಪಘಾತ ಎಂದು ಬಿಂಬಿತವಾಗುವಂತೆ ನಡೆದಿದ್ದ ಕೊಲೆ ಪ್ರಕರಣವೊಂದು ಬಹಿರಂಗಗೊಂಡಿದೆ.
ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ (83) ಅವರು ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ನ. 4ರ ಶುಕ್ರವಾರ ಸಂಜೆ ವಾಕಿಂಗ್ ಮಾಡುತ್ತಿದ್ದಾಗ ನಂಬರ್ ಪ್ಲೇಟ್ ಇರದ ಕಾರನ್ನು ಡಿಕ್ಕಿ ಹೊಡೆಸಿ ಪರಾರಿ ಆಗಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಅವರ ಪಕ್ಕದ ಮನೆಯ ಮಾದಪ್ಪ ಎಂಬವರ ಪುತ್ರ, ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದ ಮನು (30) ಹಾಗೂ ಮೈಸೂರಿನ ಇನ್ನೊಬ್ಬ ನಿವಾಸಿ ಅರುಣ್ ಗೌಡ ಎಂಬಾತನನ್ನು ಬಂಧಿಸಲಾಗಿದೆ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.
ಇದನ್ನೂ ಓದಿ: ಪಕ್ಕದ ಮನೆಯವರಿಂದಲೇ ಕೊಲೆ?; ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವಿನ ಕುರಿತು ಮಹತ್ವದ ಸುಳಿವು
ಮನೆ ಕಟ್ಟುವ ವಿಚಾರವಾಗಿ ಕುಲಕರ್ಣಿ ಅವರ ಪಕ್ಕದ ಮನೆಯ ಮಾದಪ್ಪ ಅವರೊಂದಿಗೆ ಜಗಳ ಆಗಿತ್ತು. ಸಿಸಿಟಿವಿಯಲ್ಲಿನ ದೃಶ್ಯಗಳನ್ನು ತಪಾಸಣೆ ನಡೆಸಿದ ಪೊಲೀಸರಿಗೆ ದ್ವಿಚಕ್ರವಾಹನದಲ್ಲಿ ವ್ಯಕ್ತಿಯೊಬ್ಬ ಬಂದು ಸ್ಥಳ ತೋರಿಸುತ್ತಿರುವುದು ಗೊತ್ತಾಗಿದೆ. ಈ ಅನುಮಾನದ ಮೇರೆಗೆ ಮಾದಪ್ಪನ ಪುತ್ರ ಮನುವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಂದೆಗೂ ತಿಳಿಸದೆ ಈ ಕೊಲೆ ಸಂಚು ನಡೆಸಲಾಗಿತ್ತು ಎಂದಿರುವ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದಾರೆ.
Hindu ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ: ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ