More

    ಬ್ಯಾಂಕ್​ ಖಾತೆ ಫ್ರೀಜ್​, ಪ್ರಚಾರಕ್ಕೂ ಹಣವಿಲ್ಲ: ಪ್ರಧಾನಿ ಮೋದಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್​

    ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್​ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿ ಮೋದಿ ವ್ಯವಸ್ಥಿತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಇಂದು ನಾವು ತೆಗೆದುಕೊಂಡು ಬಂದಿರುವ ಸಮಸ್ಯೆ ತಂಬಾ ಗಂಭೀರವಾಗಿದೆ. ಈ ಸಮಸ್ಯೆ ಕೇವಲ ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ ಮೇಲೆ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೇಲೆಯೇ ಅತ್ಯಂತ ಮೂಲಭೂತವಾಗಿ ಪರಿಣಾಮ ಬೀರುತ್ತದೆ. ಪ್ರಧಾನಿ ಮೋದಿ ಅವರಿಂದ ಕಾಂಗ್ರೆಸ್​ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ನಿಧಿಯನ್ನು ಫ್ರೀಜ್​ ಮಾಡಲಾಗಿದೆ. ನಮ್ಮ ಖಾತೆಗಳಿಂದ ಹಣವನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

    2018-19ನೇ ಹಣಕಾಸು ವರ್ಷದ 210 ಕೋಟಿ ರೂಪಾಯಿ ಬಾಕಿ ತೆರಿಗೆ ಮತ್ತು ದಂಡದ ಬೇಡಿಕೆಯ ನಂತರ ಆದಾಯ ತೆರಿಗೆ ಇಲಾಖೆಯು ಬ್ಯಾಂಕ್​ ಖಾತೆಗಳಲ್ಲಿದ್ದ ಕಾಂಗ್ರೆಸ್​ ಪಕ್ಷದ 115 ಕೋಟಿ ರೂಪಾಯಿಗಳನ್ನು ಫ್ರೀಜ್​ ಮಾಡಿದೆ ಎಂದು ಕಳೆದ ತಿಂಗಳು ಕಾಂಗ್ರೆಸ್​ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ಸೋನಿಯಾ ಗಾಂಧಿಯವರು ಈ ವಿಚಾರವನ್ನು ಪ್ರಸ್ತಾಪ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಈ ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ, ನಮ್ಮ ಚುನಾವಣಾ ಪ್ರಚಾರದ ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಒಂದೆಡೆ ಚುನಾವಣಾ ಬಾಂಡ್ ಸಮಸ್ಯೆ ಇದೆ, ಇದನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಎಲ್ಲರಿಗೂ ತಿಳಿದಿರುವಂತೆ ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಭಾರಿ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿವೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ವಯನಾಡು ಸಂಸದ ರಾಹುಲ್​ ಗಾಂಧಿ, ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಪರಿಣಾಮ ಪಕ್ಷದ ಪ್ರಚಾರ ಕಾರ್ಯ ನಡೆಸಲು ಅಥವಾ ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಮ್ಮ ನಾಯಕರನ್ನು ಕಳುಹಿಸಲು ರೈಲ್ವೆ ಟಿಕೆಟ್‌ ಖರೀದಿಸಲು ಸಹ ಕಷ್ಟವಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ಎಲ್ಲ ಬ್ಯಾಂಕ್​ ಖಾತೆಗಳನ್ನು ಫ್ರೀಜ್​ ಮಾಡಲಾಗಿದೆ. ನಮ್ಮಿಂದ ಪ್ರಚಾರ ಮಾಡಲು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರಿಗೆ ಹಾಗೂ ನಮ್ಮ ಅಭ್ಯರ್ಥಿಗಳಿ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲ. ಚುನಾವಣೆಗೆ ಇನ್ನು ಎರಡು ತಿಂಗಳು ಬಾಕಿ ಇರುವಾಗಲೇ ಈ ರೀತಿ ಮಾಡಲಾಗಿದೆ. ಚುನಾವಣೆಗೆ ಪೈಪೋಟಿ ನಡೆಸುವ ನಮ್ಮ ಸಾಮರ್ಥ್ಯಕ್ಕೆ ಹಾನಿ ಮಾಡಲಾಗಿದೆ. ಈಗಾಗಲೇ ನಾವು ಒಂದು ತಿಂಗಳನ್ನು ಕಳೆದುಕೊಂಡಿದ್ದೇವೆ ಎಂದು ರಾಹುಲ್​ ಹೇಳಿದರು.

    ಲೋಕಸಭೆ ಚುನಾವಣೆ ಟಿಕೆಟ್​​ಗಾಗಿ ರಾತ್ರೋರಾತ್ರಿ ಹುಡುಗಿ ನೋಡಿ ಮದುವೆಯಾದ ಗ್ಯಾಂಗ್​​ಸ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts