ಚಾಮರಾಜನಗರ: ಪ್ರಧಾನಿ ಮೋದಿ ಅವರು ಎರಡು ದಿನಗಳ ರಾಜ್ಯ ಪ್ರವಾಸದಲ್ಲಿದ್ದು, ಇಂದು ಬೆಳಗ್ಗೆ 7 ಗಂಟೆಗೆ ಬಂಡೀಪುರಕ್ಕೆ ಆಗಮಿಸಿದ್ದಾರೆ. ಸಫಾರಿ ಸೇರಿದಂತೆ ಹಲವು ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಂಡೀಪುರದಲ್ಲಿ ಹುಲಿ ಯೋಜನೆ ಘೋಷಣೆಯಾಗಿ 50 ವರ್ಷ ಪೂರ್ಣಗೊಂಡಿದೆ. 1973ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಹುಲಿ ಯೋಜನೆ ಘೋಷಣೆ ಮಾಡಿದ್ದರು ಎನ್ನುವುದು ಇತಿಹಾಸ. ಈಗ ಪಿಎಂ ಮೋದಿ ಹೊಸ ದಾಖಲೆ ಬರೆಯುತ್ತಿದ್ದು, ಬಂಡೀಪುರಕ್ಕೆ ಆಗಮಿಸಿದ ಮೊದಲ ಪ್ರಧಾನಿಯಾಗಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಬಂಡೀಪುರದಲ್ಲಿ ಪ್ರಧಾನಿ ಮೋದಿ ಸಫಾರಿ ನಡೆಸಲಿದ್ದಾರೆ.
22 ಕಿ.ಮೀ ದೂರದ ಸಫಾರಿ
ಬೆಳಗ್ಗೆ 7 ಗಂಟೆಗೆ ಬಂಡೀಪುರದ ಮೇಲುಕಾಮನಹಳ್ಳಿ ಬಳಿಯ ಹೆಲಿಪ್ಯಾಡ್ಗೆ ಪ್ರಧಾನಿ ಮೋದಿ ಬಂದಿಳಿದರು. ಬಳಿಕ ಅಲ್ಲಿಂದ ಕಾರಿನಲ್ಲಿ ಬಂಡೀಪುರ ಕ್ಯಾಂಪ್ಗೆ ಹೊರಟರು. ಬಂಡೀಪುರ ಕ್ಯಾಂಪ್ನ ಸಫಾರಿ ಕೇಂದ್ರದ ಬಳಿ ಸಫಾರಿಗೆ ಜೀಪ್ನಲ್ಲಿ ತೆರಳಲಿದ್ದಾರೆ. ಸುಮಾರು 22 ಕಿ.ಮೀ ದೂರದ ಸಫಾರಿಯನ್ನು ನಡೆಸಲಿದ್ದಾರೆ.
ಇದನ್ನೂ ಓದಿ: ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..
ಟೀ ಕುಡಿಯುವ ಸಾಧ್ಯತೆ
ಬಂಡೀಪುರದ ಬೊಳು ಗುಡ್ಡ, ಮರಳ್ಳಾಲ ಕ್ಯಾಂಪ್, ಟೈಗರ್ ರೋಡ್, ಬಾರ್ಡರ್ ರೋಡ್ನಲ್ಲಿ ಪ್ರಧಾನಿ ಮೋದಿ ಸಫಾರಿ ನಡೆಸಲಿದ್ದಾರೆ. ಮರಳ್ಳಾಲ ಕಳ್ಳಬೇಟೆ ಶಿಬಿರ ಬಳಿ ಟೀ ಕುಡಿಯುವ ಸಾಧ್ಯತೆ ಇದೆ. ಸಫಾರಿ ವಾಹನದ ಮೂಲಕ ಕೆಕ್ಕನಹಳ್ಳ ಚೆಕ್ ಪೋಸ್ಟ್ ಆಗಮಿಸುವ ಪ್ರಧಾನಿ ಮೋದಿ, ನಂತರ ಸಫಾರಿ ವಾಹನದಿಂದ ಇಳಿದು ಕಾರಿನಲ್ಲಿ ಮಧುಮಲೈನತ್ತ ಪಯಣ ಬೆಳೆಸಲಿದ್ದಾರೆ.
ಬೊಮ್ಮನ್-ಬೆಳ್ಳಿ ದಂಪತಿ ಭೇಟಿ
ತಮಿಳುನಾಡಿನ ಮಧುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಆನೆ ಶಿಬಿರದಲ್ಲಿ ಆಸ್ಕರ್ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ ಸನ್ಮಾನಿಸಲಿದ್ದಾರೆ. ಇದಾದ ನಂತರ ಅಧಿಕಾರಿಗಳೊಂದಿಗೆ 5 ರಿಂದ 10 ನಿಮಿಷ ಚರ್ಚೆ ಮಾಡಲಿದ್ದಾರೆ. ಬಳಿಕ ಮಸನಿಗುಡಿ ಸಮೀಪದ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಹೊರಡಲಿರುವ ಪ್ರಧಾನಿ ಮೋದಿ, ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಹೊರಗೆ ಓಡಾಡದಂತೆ ಸೂಚನೆ
ಮೇಲುಕಾಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮೋದಿ ಬರುವ ವೇಳೆ ಹೊರಗೆ ಬಾರದಂತೆ ಮೌಖಿಕ ಸೂಚನೆ ನೀಡಲಾಗಿದೆ. ಹಳ್ಳಿಗಳಿಂದ ಮೇಲುಕಾಮನಹಳ್ಳಿ, ಊಟಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೂ ಸೆಕ್ಯೂರಿಟಿ ನೀಡಲಾಗಿದೆ. ಯಾರೂ ಕೂಡ ಮ.12 ಗಂಟೆಯವರೆಗೂ ಹೊರಗೆ ಓಡಾಡದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ದಿಕ್ಕೆಟ್ಟ ಸಂಸಾರ: ಪತ್ನಿಯ ಆರೈಕೆಗೆ ಬಂದಿದ್ದ ಶುಶ್ರೂಷಕಿಯತ್ತ ಆಕರ್ಷಣೆಗೊಂಡ ಪತಿ!
ಕರ್ನಾಟಕ, ತಮಿಳುನಾಡು, ಕೇರಳ ಗಡಿಯಲ್ಲೂ ಪೊಲೀಸರು ಅಲರ್ಟ್ ಆಗಿದ್ದಾರೆ. ಮೂರು ರಾಜ್ಯದಿಂದ ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಭಾರೀ ಬಿಗಿ ಭದ್ರತೆಯಲ್ಲಿ ಮೋದಿ ಸಫಾರಿ ನಡೆಯಲಿದೆ.
ಮಾರ್ಗ ಬದಲಾವಣೆ
ಬಂಡಿಪುರಕ್ಕೆ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ನಿನ್ನೆ ಸಂಜೆ 4 ರಿಂದ ಇಂದು ಮಧ್ಯಾಹ್ನ 12ರ ವರೆಗೆ ತಮಿಳುನಾಡಿನ ಊಟಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 181 ಅನ್ನು ಬಂದ್ ಮಾಡಲಾಗಿದೆ. ಗುಂಡ್ಲುಪೇಟೆ ಮಾರ್ಗವಾಗಿ ತಮಿಳುನಾಡು/ಊಟಿ ಕಡೆಗೆ ಹೋಗುವವರು, ಮೂಲೆಹೊಳೆ ಚೆಕ್ಪೋಸ್ಟ್ ಮೂಲಕ ಸುಲ್ತಾನ್ ಬತ್ತೇರಿಗೆ ತೆರಳಿ ಅಲ್ಲಿಂದ ಹೋಗಬಹುದು ಅಥವಾ ಚಾಮರಾಜನಗರದ ಮೂಲಕ ಸತ್ಯಮಂಗಲಕ್ಕೆ ತೆರಳಿ ಹೋಗಬಹುದು. ಸದ್ಯ ಗುಂಡ್ಲುಪೇಟೆಯಲ್ಲಿ ರಸ್ತೆಗೆ ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ. ಹಳ್ಳಿಗಳಿಗೆ ಹೋಗುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ತಮಿಳುನಾಡಿಗೆ ಹೋಗುವವರಿಗೆ ಬದಲಿ ಮಾರ್ಗದಲ್ಲಿ ಸಂಚಾರ ಮಾಡಲು ಸೂಚನೆ ನೀಡಲಾಗಿದೆ.
ಕರೆಂಟ್ ಲೋಡ್ ತಗ್ಗಿಸಲು ಮುಂದಾದ ಪಂಜಾಬ್ ಸರ್ಕಾರ; ನೂತನ ನಿಯಮ ಜಾರಿ